ಚಿತ್ರದುರ್ಗ: ಏರುತ್ತಿರುವ ತಾಪಮಾನ, ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಯ ತೀವ್ರತೆ, ಚಿತ್ರದುರ್ಗ ಪರಿಸರ ಸಮಸ್ಯೆಗಳ ಕುರಿತು ಫೆ. 4ರಂದು ಕ್ರೀಡಾಭವನದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೂ ರಾಜ್ಯಮಟ್ಟದ ಪರಿಸರ ಜಾಗೃತಿ ಸಮಾವೇಶ ಮತ್ತು ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಅವಿನಾಶ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಪಮಾನ ಏರಿಕೆ ಕಡಿಮೆಗೊಳಿಸಲು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡ ನಿರ್ಣಯಗಳು ಹಾಗೂ ಇಂದಿನ ಸ್ಥಿತಿಗತಿ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶಿವಸುಂದರ್, ಏರಿಕೆಯಿಂದಾಗಿ ಜೀವಸಂಕುಲ ಗಾಳಿ, ನೀರು, ಆಹಾರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯಲ್ಲಪ್ಪರೆಡ್ಡಿ ಮಾತನಾಡಲಿದ್ದಾರೆ ಎಂದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಅತಿವೃಷ್ಟಿ-ಅನಾವೃಷ್ಟಿ ಒಟ್ಟೊಟ್ಟಿಗೆ ಸಂಭವಿಸುತ್ತಿವೆ. ಬಿಸಿ ಅಲೆಗಳ, ಸೈಕ್ಲೋನ್ಗಳ ಹಾವಳಿ ಇದೆ. ಸಮುದ್ರದಲ್ಲಿ ಆಮ್ಲಿಯತೆ ಪ್ರಮಾಣ ಹೆಚ್ಚಾಗಿದೆ. ಹವಾಮಾನ ಬದಲಾವಣೆ ಕಾರಣದಿಂದ ದೇಶ, ರಾಜ್ಯದಲ್ಲಿ ಬಾರಿ ನಷ್ಟ ಉಂಟಾಗಲಿದೆ. ಮಾನವರ ಆರೋಗ್ಯದ ಮೇಲೂ ಅನೇಕ ಪರಿಣಾಮ ಬೀರುತ್ತಿದ್ದು, ಜೀವವೈವಿಧ್ಯತೆ ನಶಿಸುತ್ತಿದೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ದೊಡ್ಡಮಲ್ಲಯ್ಯ, ಶಫೀವುಲ್ಲಾ, ಹಂಪಯ್ಯನಮಾಳಿಗೆ ಧನಂಜಯ, ಸಿದ್ಧರಾಜು ಜೋಗಿ, ದಾಸೇಗೌಡ, ಹೊಳೆಯಪ್ಪ, ಮಹಾಂತೇಶ್ ಇತರರಿದ್ದರು.