ಬೀದರ್: ಇಲ್ಲಿಯ ನೌಬಾದ ಹತ್ತಿರದ ಜ್ಞಾನ ಶಿವಯೋಗಾಶ್ರಮದಲ್ಲಿ ಸೂರ್ಯ ಫೌಂಡೇಷನ್ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮನೆಗೊಂದು ಮರ-ಊರಿಗೊಂದು ಸಣ್ಣ ವನ ಅಭಿಯಾನ ನಡೆಯಿತು.
ಆಶ್ರಮದ ಅಧಿಪತಿ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಸಸಿ ನೆಡುವ ಜತೆಗೆ ಮಾತೆಯರಿಗೆ ಸಸಿ ವಿತರಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಿದೆ. ಪರಿಸರ ಉಳಿಯದಿದ್ದರೆ ನಾವ್ಯಾರೂ ಉಳಿಯುವುದಿಲ್ಲ. ಪ್ರಕೃತಿ ನಮಗೆ ಎಲ್ಲವೂ ಕೊಟ್ಟಿದೆ. ಆದರೆ ನಾವು ಮಾತ್ರ ಅದಕ್ಕೆ ವಾಪಸ್ ಏನೂ ಕೊಡುತ್ತಿಲ್ಲ. ಬದಲಾಗಿ ಸ್ವಾರ್ಥಕ್ಕಾಗಿ ಅದರ ನಾಶಕ್ಕೆ ನಿಂತಿರುವುದು ದುರಂತದ ಸಂಗತಿ ಎಂದರು.
ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು, ಅದಕ್ಕೆ ಹೆಮ್ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು. ಇದೇ ವೇಗದಲ್ಲಿ ಪರಿಸರದ ನಾಶ ನಡೆದರೆ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು. ನೈಸಗರ್ಿಕ ವಿಕೋಪಗಳು ಇಡೀ ಮನುಕುಲಕ್ಕೆ ವಿನಾಶದ ಅಂಚಿಗೆ ತಳ್ಳಬಹುದು. ಈಗಲೇ ಸಸಿ ನೆಟ್ಟು ಅವುಗಳಿಗೆ ಬೆಳೆಸಿದರೆ ಮುಂದಿನ ಭವಿಷ್ಯ ಒಳ್ಳೆಯದು. ಇಲ್ಲದಿದ್ದರೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಪ್ರತಿ ಕುಟುಂಬದವರು ತಮ್ಮ ಮನೆಯಂಗಳದಲ್ಲಿ ಅಥವಾ ಹೊಲಗಳಲ್ಲಿ ಹಣ್ಣಿನ ಗಿಡಗಳನ್ನು ಹೆಚ್ಚೆಚ್ಚು ಬೆಳೆಸಬೇಕು. ಈ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಸೂರ್ಯ ಫೌಂಡೇಷನ್ ಮಾಡುತ್ತಿರುವುದು ಶ್ಲಾಘನೀಯ. ಎಲ್ಲವೂ ಸರ್ಕಾರವೇ ಮಾಡಬೇಕೆಂಬ ಮನೋಭಾವ ಯಾರಲ್ಲೂ ಬರಕೂಡದು. ಉತ್ತಮ ಕೆಲಸಗಳು ಮಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಸೂರ್ಯ ಫೌಂಡೇಷನ್ ಜಿಲ್ಲಾ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿದರು. ಪ್ರಮುಖರಾದ ವೀರೇಶ ಸ್ವಾಮಿ, ಸಿದ್ದು ಕಾಡೋದೆ, ರಮೇಶ ಅರಾಳೆ, ಸಂಗಮೇಶ ದಾನಿ ಇತರರಿದ್ದರು. ಈ ವೇಳೆ ಪರಿಸರ ಸಂರಕ್ಷಣೆ ಪ್ರತಿಜ್ಞೆ ಮಾಡಲಾಯಿತು.