ಕಾರವಾರ: ಕಳೆದ ಆಗಸ್ಟ್, ಸೆಪ್ಟೆಂಬರ್ನಲ್ಲಿ ಉಂಟಾದ ಪ್ರವಾಹ ಜಿಲ್ಲೆಯ ಜನಜೀವನದ ಮೇಲಷ್ಟೇ ಅಲ್ಲ, ಪರಿಸರದ ಮೇಲೂ ಭಾರಿ ಪ್ರಭಾವ ಬೀರಿದೆ. ಪ್ರವಾಹದ ಪರಿಣಾಮ ಕಾಳಿ ನದಿಯ ಸಂರಕ್ಷಿತ ಪ್ರದೇಶದಲ್ಲಿ ಕಾಂಡ್ಲಾ ಸಸ್ಯಗಳು ಸಾಯುತ್ತಿರುವುದು ತಡವಾಗಿ ಗಮನಕ್ಕೆ ಬಂದಿದೆ. ವಿಶ್ವ ತರಿ ಭೂಮಿ ದಿನಾಚರಣೆಯ ಅಂಗವಾಗಿ ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ತಜ್ಞರಾದ ಡಾ.ವಿ.ಎನ್. ನಾಯಕ, ಡಾ. ಶಿವಾನಂದ ಭಟ್, ಡಾ.ಸಂಜೀವ ದೇಶಪಾಂಡೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ದೇವಬಾಗಕ್ಕೆ ಭೇಟಿ ನೀಡಿದ್ದರು. ಆಗ ಕಾಂಡ್ಲಾ ಗಿಡಗಳು ಸಾಯುತ್ತಿರುವುದು ಗಮನಕ್ಕೆ ಬಂದಿದೆ. ಸಂರಕ್ಷಿತ ಪ್ರದೇಶ: ವಿಶ್ವದಲ್ಲಿರುವ ಒಟ್ಟ 24 ಕಾಂಡ್ಲಾ ಪ್ರಭೇದಗಳಲ್ಲಿ 16 ಕಾಳಿ ನದಿಯಲ್ಲೇ ಇವೆ. ದೇವಬಾಗ ಸುತ್ತ 14 ಪ್ರಭೇದಗಳಿವೆ. ಸಿಆರ್ರೆಡ್ 2011ರ ನಿಯಮಾವಳಿಯಂತೆ ಕಾಳಿ ನದಿಯ ಅಳಿವೆಯನ್ನು ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ.
ಕಾರಣವೇನು..?: ಕಾಳಿ ನದಿಗೆ ಪ್ರವಾಹ ಬಂದಾಗ ನೀರು ಉಕ್ಕಿ ಬಂದು ದೇವಬಾಗ ಸಮೀಪ ಅಂದಾಜು ಒಂದು ಕಿಮೀ ಇದ್ದ ಮರಳು ದಿಬ್ಬವನ್ನು ನೀರು ಕೊಚ್ಚಿಕೊಂಡು ಹೋಗಿದೆ. ಮರಳು ಪಕ್ಕದ ಮಾವಿನ ಹೊಳೆ ಸಮುದ್ರ ಸೇರುವ ಭಾಗದಲ್ಲಿ ರಾಶಿ ಹಾಕಿದೆ. ಇದರಿಂದ ಮಾವಿನ ಹೊಳೆ ಭಾಗಕ್ಕೆ ಉಪ್ಪು ನೀರು ಹೋಗುತ್ತಿಲ್ಲ. ಕಾಂಡ್ಲಾ ಸಮುದ್ರದ ಉಬ್ಬರ ಹಾಗೂ ಇಳಿತ ಇರುವ ಅಳಿವೆ ಪ್ರದೇಶದಲ್ಲಿ ಮಾತ್ರ ಬೆಳೆಯುವ ಸಸ್ಯ ಕೆಲ ತಿಂಗಳಿಂದ ಉಪ್ಪು ನೀರು ಸಿಗದೇ ಕಾಂಡ್ಲಾಗಳು ಸಾಯುತ್ತಿವೆ ಎನ್ನುತ್ತಾರೆ ಸಾಗರ ವಿಜ್ಞಾನಿ ಡಾ.ವಿ.ಎನ್. ನಾಯಕ.
ಮಾವಿನ ಹೊಳೆ ಭಾಗದಲ್ಲಿ ಅಂದಾಜು 5 ಎಕರೆಗೂ ಹೆಚ್ಚು ಭಾಗದಲ್ಲಿ ಅಪರೂಪದ ಕಾಂಡ್ಲಾ ಸಸ್ಯಗಳಿವೆ. ಅವುಗಳನ್ನು ರಕ್ಷಿಸಿಕೊಳ್ಳಲು ಮಾವಿನ ಹೊಳೆ ಅಳಿವೆಯ ಬಾಯಿಗೆ ತುಂಬಿದ ಉಸುಕು ಬಿಡಿಸಿಕೊಡಲು ಅರಣ್ಯ ಅಧಿಕಾರಿಗಳಲ್ಲಿ ವಿನಂತಿಸಿದ್ದೇನೆ.
| ಡಾ.ವಿ.ಎನ್. ನಾಯಕ ಸಾಗರ ವಿಜ್ಞಾನಿ