ಚಿತ್ರದುರ್ಗ: ನಗರದೇವತೆ ಉಚ್ಚಂಗಿಯಲ್ಲಮ್ಮ ದೇವಿ ದೇಗುಲದಲ್ಲಿ ದಸರಾ ಅಂಗವಾಗಿ ಒಂಬತ್ತು ದಿನದ ಉತ್ಸವಾಚರಣೆಗಾಗಿ ಸಿದ್ಧತೆ ನಡೆದಿದ್ದು, ದೇವಿಯ ಉತ್ಸವಮೂರ್ತಿಯನ್ನು ಅ. 15ರಿಂದ ಪಟ್ಟಕ್ಕೆ ಕೂರಿಸಲಾಗಿದೆ. ಬನ್ನಿಮಹಾಕಾಳಮ್ಮ, ಉಚ್ಚಂಗಿಯಲ್ಲಮ್ಮ ದೇವಿಯ ಕೆಂಡೋತ್ಸವ ಈ ಬಾರಿ ಅ. 24ರ ವಿಜಯದಶಮಿ ದಿನದಂದು ಹಿಂದಿಗಿಂತಲೂ ಅದ್ಧೂರಿಯಾಗಿ ಜರುಗಲಿದೆ ಎಂದು ಅರ್ಚಕ ಅಭಿಷೇಕ್ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಸಿಹಿನೀರು ಹೊಂಡದಲ್ಲಿ ದೇವಿಗೆ ಗಂಗಾಪೂಜೆಯಾದ ಬಳಿಕ ಸಂತೆಹೊಂಡ ಸಮೀಪದ ಬನ್ನಿಮಹಾಕಾಳಮ್ಮ ದೇಗುಲದ ಮುಂಭಾಗ ನೂರಾರು ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ನೆರವೇರಲಿದೆ. ಜತೆಗೆ ಬನ್ನಿ ಮುಡಿಯುವ ಸಂಪ್ರದಾಯ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.