ಶಿರಸಿ: ಕಪ್ಪುಗುಡ್ಡೆಯ ಅಂಧತ್ವ ನಿವಾರಣೆಗೆ ಹಾಗೂ ನೇತ್ರದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ ಎಂದು ಹುಬ್ಬಳ್ಳಿಯ ರಾಮಕೃಷ್ಣ ಆಶ್ರಮದ ಶ್ರೀರಘುವೀರಾನಂದಜಿ ನುಡಿದರು.
ನಗರದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನೇತ್ರ ಭಂಡಾರದ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಶತಕದ ಭಿತ್ತಿ ಪತ್ರಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ನೇತ್ರದಾನದ ಬಗ್ಗೆ ನಮ್ಮ ಸಮಾಜದಲ್ಲಿರುವ ಅನೇಕ ಧಾರ್ವಿುಕ ಮೂಢನಂಬಿಕೆಗಳನ್ನು ಅಲ್ಲಗಳೆದು, ಲಯನ್ಸ್ ನಯನ ನೇತ್ರಭಂಡಾರ ಗಣನೀಯ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.
ಭಂಡಾರದ ತಾಂತ್ರಿಕ ನಿರ್ದೇಶಕ ಡಾ. ವಿಶ್ವನಾಥ ಅಂಕದ ಮಾತನಾಡಿ, ಜಿಲ್ಲೆ ಹಾಗೂ ಸುತ್ತ ಮುತ್ತ ವಿಭಾಗದ ಜನರಲ್ಲಿ ಕಪ್ಪುಗುಡ್ಡೆಯ ಅಂಧರ ಸಂಖ್ಯೆ ಇನ್ನೂ ಗಣನೀಯವಾಗಿದೆ. ಇವರ ಅಂಧತ್ವ ನಿವಾರಣೆಗೆ ನೇತ್ರದಾನದ ಮೂಲಕ ದೊರೆತ ಕಣ್ಣುಗಳ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಮೂಲಕ ಮಾತ್ರ ಸಾಧ್ಯ. ಆದರೆ, ಇನ್ನೂ ಸಮಾಜದಲ್ಲಿ ನೇತ್ರದಾನದ ಅರಿವು ಮೂಡದಿರುವುದು ದುರಾದೃಷ್ಟ ಎಂದರು.
ಲಯನ್ಸ್ ನಯನ ನೇತ್ರ ಭಂಡಾರವು ಶಿರಸಿಯ ನಯನ ಫೌಂಡೇಷನ್, ಲಯನ್ಸ್ ಕ್ಲಬ್ ಮತ್ತು ಗಣೇಶ ನೇತ್ರಾಲಯದ ಜಂಟಿ ಯೋಜನೆಯಾಗಿದ್ದು, ಜಿಲ್ಲೆಯ ಮೊಟ್ಟ ಮೊದಲ ಏಕೈಕ ಸುಸಜ್ಜಿತ ನೇತ್ರಭಂಡಾರವಾಗಿದೆ. 2017ರಲ್ಲಿ ಉದ್ಘಾಟನೆಗೊಂಡ ಇದು 3 ವರ್ಷಗಳಿಂದಲೂ ನಿರಂತರವಾಗಿ ದೃಷ್ಟಿ ಕಲ್ಪಿಸುವ ಸೇವೆಯನ್ನು ನುರಿತ ತಂಡದಿಂದ ಸಲ್ಲಿಸುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು. ನೇತ್ರ ಭಂಡಾರವು ಇದೀಗ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಶತಕದ ಗಡಿಯನ್ನು ದಾಟಿದೆ. ಕಪ್ಪುಗುಡ್ಡೆಯ ಅಂಧರಿಗೆ ಕಸಿ ಶಸ್ತ್ರ ಚಿಕಿತ್ಸೆಗಳ ಮೂಲಕ ದೃಷ್ಟಿ ಕಲ್ಪಿಸಿದೆ. 147 ಕಣ್ಣುಗಳನ್ನು ನೇತ್ರದಾನದ ಮೂಲಕ ಪಡೆಯಲಾಗಿದೆ ಹಾಗೂ 55ಕ್ಕೂ ಹೆಚ್ಚು ಕಣ್ಣುಗಳನ್ನು ರಾಜ್ಯದ ವಿವಿಧ ಕಣ್ಣಿನ ಆಸ್ಪತ್ರೆಗಳಿಗೆ ಕಸಿ ಶಸ್ತ್ರ ಚಿಕಿತ್ಸೆಗಳ ಸಲುವಾಗಿ ವಿತರಿಸಲಾಗಿದೆ ಎಂದರು. ಬುದ್ದಿಯೋಗಾನಂದಜಿ, ಡಾ.ಕೆ.ವಿ.ಶಿವರಾಮ, ತನುಶ್ರೀ ಇತರರಿದ್ದರು.