ನೆಲಮಂಗಲ / ಬೆಂಗಳೂರು ಗ್ರಾಮಾಂತರ: ಜಿಲ್ಲೆಯಾದ್ಯಂತ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೊಟೇಲ್, ಸೂಪರ್ ಮಾರ್ಕೆಟ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ಪರಿಶೀಲಿಸಿದರು. ಕರೊನಾ ಮಾರ್ಗಸೂಚಿ ಹೊರತಾಗಿಯೂ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಮದ್ಯ ಸರಬರಾಜು ಮಾಡುತ್ತಿರುವುದನ್ನು ಗಮನಿಸಿ, ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಬುಧವಾರ ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಯ ಜನರಲ್ ವಾರ್ಡ್, ಕೋವಿಡ್ ವಾರ್ಡ್, ಹೊರರೋಗಿಗಳ ತಪಾಸಣಾ ಕೊಠಡಿ ಪರಿಶೀಲಿಸಿದರು. ನಂತರ ಆಸ್ಪತ್ರೆಯ ಸಮಸ್ಯೆ ಹಾಗೂ ಕರೊನಾ ಸೋಂಕು ಪರೀಕ್ಷೆ, ಲಸಿಕೆ ವಿತರಣೆ ಕುರಿತಾಗಿ ವೈದ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು.
ಹೊಟೇಲ್, ಮಾಲ್ಗಳಿಗೆ ಬೀಗ: ನಗರದ ಸೊಂಡೇಕೊಪ್ಪ ವೃತ್ತದ ಬಳಿಯ ಉಡುಪಿ ಗ್ರಾೃಂಡ್ ಹೊಟೇಲ್ಗೆ ತೆರಳಿದ ಜಿಲ್ಲಾಧಿಕಾರಿ ಕರೊನಾ ಮಾರ್ಗಸೂಚಿ ಉಲ್ಲಂಘನೆಯಡಿ ಹೋಟೆಲ್ ವ್ಯವಸ್ಥಾಪಕರನ್ನು ವಶಕ್ಕೆ ಪಡೆದರು. 1 ವಾರ ಹೋಟೆಲ್ ಬಂದ್ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ಮುಖ್ಯರಸ್ತೆಯಲ್ಲಿನ ಶಾಪಿಂಗ್ ಸಿಟಿ, ಗಿರಿಯಾಸ್ ಮತ್ತು ಮೋರ್ ಸೂಪರ್ ಮಾರ್ಕೆಟ್ಗಳಲ್ಲಿ ಹವಾನಿಯಂತ್ರಕ ಬಳಕೆ ಮಾಡುತ್ತಿದ್ದುದನ್ನು ಗಮನಿಸಿ ಮಳಿಗೆಗಳಿಗೆ ಬೀಗ ಹಾಕಿಸಿದರು.
ಬಾರ್ ಅಂಡ್ ರೆಸ್ಟೋರೆಂಟ್ಗೆ ದಂಡ: ನಗರದ ಶ್ರೀನಿಧಿ ಲಾಡ್ಜ್ ಹಾಗೂ ಬಾರ್ಗೆ ತೆರಳಿ ಹೆಚ್ಚಿನ ಸಂಖ್ಯೆಯ ಜನರು ಮದ್ಯಸೇವನೆ ಮಾಡುತ್ತಿದ್ದುದನ್ನು ಗಮನಿಸಿ ಬಾರ್ ಮಾಲೀಕರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದರು. ಪರಮಣ್ಣ ಬಡಾವಣೆ ಉಪನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜನರು ಗುಂಪುಗೂಡಲು ಅವಕಾಶ ಕಲ್ಪಿಸದಂತೆ ನೋಂದಣಾಧಿಕಾರಿಗೆ ಎಚ್ಚರಿಕೆ ನೀಡಿದರು.
ಬೆಡ್ ಸಮಸ್ಯೆ ಇಲ್ಲ: ಜಿಲ್ಲೆಯಾದ್ಯಂತ ಕೋವಿಡ್-19 ವಾರ್ಡ್ನಲ್ಲಿ ಬೆಡ್ಗಳ ಸಮಸ್ಯೆ ಇಲ್ಲ. ಅದರೆ ಆಕ್ಸಿಜನ್ ಸಿಲಿಂಡರ್ಗಳ ಕೊತೆ ಇದೆ. ಮೇಲಧಿಕಾರಿಗಳ ಜತೆ ಚರ್ಚಿಸಿ ಸಿಲಿಂಡರ್ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ನಗರಸಭೆ ಅಧಿಕಾರಿಗಳಿಗೆ ತರಾಟೆ: ನಗರದ ಹೊಟೇಲ್, ಶಾಪಿಂಗ್ ಮಾಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳದ ನಗರಸಭೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅವರು ತರಾಟೆಗೆ ತಗೆದುಕೊಂಡರು. ಜಿಲ್ಲೆಯಾದ್ಯಂತ ಕರೊನಾ ಸೋಂಕಿನ ಜತೆಗೆ ಸಾವಿನ ಪ್ರಕರಣಗಳ ಹೆಚ್ಚಾಗುತ್ತಿವೆ. ಅಧಿಕಾರಿಗಳು ಬೇಜವಾಬ್ದಾರಿ ತೋರದೆ, ಸರ್ಕಾರದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ಹಾಕುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೆ. ಶ್ರೀನಿವಾಸ್ ಹೇಳಿದರು.
ತಹಸೀಲ್ದಾರ್ ಕೆ. ಮಂಜುನಾಥ್, ತಾಪಂ ಇಒ ಮೋಹನ್ಕುಮಾರ್, ಡಿವೈಎಸ್ಪಿ ಎಚ್.ಪಿ. ಜಗದೀಶ್, ಸಿಪಿಐ ಹರೀಶ್, ಎಸ್ಐಗಳಾದ ಎನ್. ಸುರೇಶ್, ವಿ. ಅಂಜನ್ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಹರೀಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನರಸಿಂಹಯ್ಯ, ರಾಜಸ್ವ ನಿರೀಕ್ಷಕ ಸುದೀಪ್, ನಗರಸಭೆ ಕಂದಾಯ ಅಧಿಕಾರಿ ಸವಿತಾ, ಸುಧಾಕರ್, ಆರೋಗ್ಯ ನಿರೀಕ್ಷಕ ಬಸವರಾಜು ಮತ್ತಿತರರು ಇದ್ದರು.
ಡಿಸಿ ಕಂಡು ಕುಡುಕರು ದಿಕ್ಕಾಪಾಲು: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ವೊಂದಕ್ಕೆ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ದಿಕ್ಕಾಪಾಲಾಗಿ ಓಡಿದರು.
ಪರಸ್ಪರ ಅಂತರ ಕಾಯ್ದುಕೊಳ್ಳದೆ ಕರೊನಾ ನಿಯಮ ಉಲ್ಲಂಘಿಸಿ ಮದ್ಯ ಸೇವಿಸುವುದರಲ್ಲಿ ತಲ್ಲೀನರಾಗಿದ್ದ ಕುಡುಕರು ಡಿಸಿ ಹಾಗೂ ಅಧಿಕಾರಿಗಳ ತಂಡ ಎಂಟ್ರಿ ಆಗುತ್ತಿದ್ದಂತೆ ತಡಬಡಾಯಿಸಿ ಹೊರ ಓಡಿದರು. ಯಾರು ಬಂದಿದ್ದಾರೆ, ಯಾಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದ ಗ್ರಾಹಕರು ಕುಡಿದ ಬಿಲ್ ಸಹ ನೀಡದೆ ಜಾಗ ಖಾಲಿ ಮಾಡಿದರು.