ಯಲ್ಲಾಪುರ: ಅರ್ಚಕನ ನಿಷ್ಠೆ, ವೇದಮಂತ್ರಗಳ ಘೊಷ, ನಿಯಮಗಳ ಪಾಲನೆ, ಪಾವಿತ್ರ್ಯೆ ಹಾಗೂ ಅನ್ನದಾನ ಇವೆಲ್ಲವೂ ಇದ್ದರೆ ದೇವಸ್ಥಾನವೊಂದು ಉತ್ತಮ ಪುಣ್ಯಕ್ಷೇತ್ರವಾಗಿ ಬೆಳೆಯಲು ಸಾಧ್ಯ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಪಟ್ಟಣದ ಕಾಳಮ್ಮನಗರ ಕಾಳಮ್ಮದೇವಿ ದೇವಸ್ಥಾನದ ಮರು ಪ್ರತಿಷ್ಠಾ ಮಹೋತ್ಸವದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಜೀವನದ ಅಲಂಕಾರ ಹಾಗೂ ಮನಸ್ಸಿನ ಉದ್ಧಾರಕ್ಕೆ ದೇವಸ್ಥಾನಗಳ ಅಗತ್ಯವಿದೆ. ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿನಲ್ಲಿರುವ ಕ್ಷುಲ್ಲಕ ಭಾವನೆಗಳು ದೂರವಾಗುತ್ತವೆ. ದೇವಸ್ಥಾನಕ್ಕೆ ಹೋಗುವಾಗ ಮನಸ್ಸು ಭಾರವಾಗಿದ್ದರೆ, ಬರುವಾಗ ಮನಸ್ಸು ಹಗುರವಾಗುತ್ತದೆ. ದೇವಸ್ಥಾನಗಳ ನಿರ್ಮಾಣ ಮಾಡಿದರೆ ಅದು ಸಾವಿರಾರು ವರ್ಷಗಳ ಕಾಲ ಶಾಶ್ವತವಾಗಿ ಇರುತ್ತದೆ. ದೇವರನ್ನು ನಿತ್ಯ ಅತಿಥಿಯೆಂದು ಭಾವಿಸಿ, ನಿರಂತರ ಪೂಜೆ ಮಾಡಿದಾಗ ಮಾತ್ರ ದೇವಾಲಯದಲ್ಲಿ ದೇವತಾ ಸಾನ್ನಿಧ್ಯ ಸದಾ ಇರುತ್ತದೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸ್ವರ್ಣವಲ್ಲೀ ಧರ್ಮಪೀಠದ ಪ್ರಭಾವ ಜನರನ್ನು ಧಾರ್ವಿುಕತೆಯೆಡೆಗೆ ಸೆಳೆಯುತ್ತಿದೆ ಎಂದರು. ಡಿಡಿಪಿಐ ದಿವಾಕರ ಶೆಟ್ಟಿ, ಆಗಮ ಶಾಸ್ತ್ರಜ್ಞ ಕುಮಾರ ಭಟ್ಟ ಕೊಳಗಿಬೀಸ್, ಪ್ರಮುಖರಾದ ಸಿ.ಜಿ. ಹೆಗಡೆ, ರವಿ ನಾಯ್ಕ, ರಾಮು ನಾಯ್ಕ, ಅರ್ಚಕ ರಾಮಚಂದ್ರ ಭಟ್ಟ ಇದ್ದರು. ವೇ. ಮಂಜುನಾಥ ಭಟ್ಟ ವೇದಘೊಷಗೈದರು. ಚಿನ್ನಯ ಧೂಳಿ ಭಗವದ್ಗೀತಾ ಪಠಣ ಮಾಡಿದರು. ಕಟ್ಟಡ ಸಮಿತಿ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿದರು. ದೇವಸ್ಥಾನ ಅಧ್ಯಕ್ಷ ಶಿವಾನಂದ ನಾಯ್ಕ ಮಾತನಾಡಿದರು. ಪ್ರಸಾದ ಹೆಗಡೆ ನಿರ್ವಹಿಸಿದರು.