ದಾವಣಗೆರೆ: ಕನಿಷ್ಠ ವೇತನ, ಪ್ರತಿಮಾಹೆ 5ನೇ ತಾರೀಖಿನೊಳಗಾಗಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುಬಿಡಿಟಿ ಕಾಲೇಜು ಸಿ ಮತ್ತು ಡಿ ದರ್ಜೆ ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 4ನೇ ದಿನ ಪೂರೈಸಿದೆ.
ಕಾಲೇಜು ಪ್ರವೇಶ ದ್ವಾರದ ಬಳಿ ಪ್ರತಿಭಟನಾ ಧರಣಿ ನಡೆಸಿದ ನೌಕರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಿದರು.
2022ರ ಆಗಸ್ಟ್ನಿಂದ ನಿಗದಿಯಂತೆ ವೇತನ ನೀಡಲು ಸರ್ಕಾರ ಆದೇಶಿಸಿದೆ. ಈ ಹಿಂದಿನಂತೆ ಕಾರ್ಯ ನಿರ್ವಹಣೆಯ ಹುದ್ದೆಯ ಪದನಾಮ ನಮೂದಿಸಬೇಕು. ಮೊದಲಿನಂತೆ ವಿಭಾಗಗಳಲ್ಲಿ ಹಾಜರಾತಿ ನಿರ್ವಹಿಸಬೇಕು. ಪ್ರತಿ ತಿಂಗಳು ವೇತನ ಚೀಟಿ ನೀಡುವುದಲ್ಲದೆ ಇಪಿಎಫ್, ಇಎಸ್ಐ ತುಂಬಬೇಕು. ಬಾಕಿ ಇರುವ ಇಪಿಎಫ್ ಕಟ್ಟಬೇಕು. ಭದ್ರತಾ ಸಿಬ್ಬಂದಿಗೆ ತಿಂಗಳಲ್ಲಿ 1 ದಿನದ ರಜಾ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯು ಪ್ರತಿವರ್ಷ ಏಪ್ರಿಲ್ ತಿಂಗಳಿನಿಂದ ವಾರ್ಷಿಕ ಸಾಲಿನ ಕನಿಷ್ಠ ವೇತನಕ್ಕೆ ವಿಡಿಎ ಮೊತ್ತವನ್ನು ಹೆಚ್ಚಿಸಬೇಕು. ಹಿಂದಿನ ಹೆಚ್ಚುವರಿ ಮೊತ್ತವನ್ನು ನೀಡಬೇಕು. ಕಾಲೇಜಿನ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರನ್ನು ಸಂಚಿತ ವೇತನದಡಿ ನೇಮಿಸಿಕೊಳ್ಳಬೇಕು. ಜತೆಗೆ ಕಾರ್ಪೆಂಟರ್, ಪ್ಲಂಬರುಗಳಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು, ಹೊರ ಗುತ್ತಿಗೆ ನೌಕರರಾದ ಡಿ.ಕರಿಬಸಪ್ಪ, ವಿರುಪಾಕ್ಷಪ್ಪ, ಕವಿತಾ, ರೇಣುಕಾ, ಎ.ಪ್ರಸನ್ನಕುಮಾರ, ಬಿ.ಪರಮೇಶ್ವರಪ್ಪ, ಮೌನೇಶಾಚಾರ್, ಬಾಲರಾಜ, ರವಿಕುಮಾರ, ಸಿದ್ದಣ್ಣ, ಎಚ್.ಕೆ.ಅಕ್ಕ ಮಹಾದೇವಿ, ನಿರ್ಮಲ, ರೇಣುಕಾ, ಪುಷ್ಪಾ, ಎಂ.ಕವಿತಾ, ಜ್ಯೋತಿ, ಅಶ್ವಿನಿ, ಕೀರ್ತಿ, ರೇಖಾಬಾಯಿ ಇತರರಿದ್ದರು.