ಮಳವಳ್ಳಿ: ನಾಗರ ಅಮವಾಸ್ಯೆ ಮತ್ತು ಜ್ಯೋತಿರ್ಭಿಮೇಶ್ವರ ವ್ರತದ ದಿನದ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಭಕ್ತರು ಸಾಗರೋಪಾದಿಯಾಗಿ ಬಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಪಟ್ಟಣದ ಗಂಗಾಧರೇಶ್ವರ, ಕೋಟೆ ಕಾಳಮ್ಮ, ಸಾರಂಗಪಾಣಿ, ಮೂಲೇ ಗಣೇಶ, ಮದ್ದೂರು ರಸ್ತೆ ಬದಿಯಲ್ಲಿರುವ ಮಹದೇಶ್ವರ, ದಂಡಿನ ಮಾರಮ್ಮ, ಪಟ್ಟಲದಮ್ಮ ಹಾಗೂ ಹೊರವಲದಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ದೇವರ ಮೂರ್ತಿಗಳಿಗೆ ವಿವಿಧ ಹೂಗಳಿಂದ ಅಲಂಕಾರಗೊಳಿಸಿ ವಿಶೇಷ ಪೂಜೆ ನಡೆಸಲಾಯಿತು. ಭೀಮನ ಅಮವಾಸ್ಯೆ ದಿನಂದಂದು ಗೃಹಿಣಿಯರು ತಮ್ಮ ಪತಿಯ ಕಾಲಿಗೆ ಪೂಜೆಮಾಡಿ ಆಶೀರ್ವಾದ ಪಡೆದರು. ನಂತರ ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿರುವ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆದರು. ಹಲಗೂರು ಸಮೀಪ ಮುತ್ತತ್ತಿ ಆಂಜನೇಯ, ಬಸವನ ಬೆಟ್ಟದ ಹೆಬ್ಬಟ್ಟದ ಬಸವೇಶ್ವರ, ತೆಂಕಹಳ್ಳಿ ಸಮೀಪದ ಶನೈಶ್ಚರ, ಪೂರಿಗಾಲಿ ಪಾತಾಳೇಶ್ವರ, ಸರಗೂರು ಸಮೀಪದ ಮಹದೇಶ್ವರ, ಬೆಳಕವಾಡಿ ಕಾಶಿ ವಿಶ್ವನಾಥ, ಗೌಡಗೇರೆ ಗ್ರಾಮದಲ್ಲಿರುವ ಬಸವೇಶ್ವರ, ಮತ್ತಿತಾಳೇಶ್ವರ, ಹಿಟ್ಟನಹಳ್ಳಿ ಸಮೀಪದ ಮಾರಮ್ಮ, ಮಿಕ್ಕೆರೆ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಸಾಂಗವಾಗಿ ನೆರೆವೇರಿತು.