ನವಲಗುಂದ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಪ್ರತಿ ತಾಲೂಕಾಸ್ಪತ್ರೆಯಲ್ಲಿ 50 ಆಕ್ಸಿಜನ್ ಹಾಸಿಗೆಗಳನ್ನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನವಲಗುಂದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿನ ಪೂರ್ವ ತಯಾರಿಯನ್ನು ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಕ್ರವಾರ ಪರಿಶೀಲಿಸಿದರು.
ಕೋವಿಡ್ ತಡೆಗಾಗಿ ಕೈಗೊಂಡ ಮುಂಜಾಗ್ರತೆ ಕ್ರಮಗಳ ಬಗೆಗೆ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ರೂಪಾ ಕಿಣಗಿ ಅವರೊಂದಿಗೆ ರ್ಚಚಿಸಿದರು.
ತಾಲೂಕಿನ ಮೊರಬ, ಶಿರಕೋಳ, ಗುಡಿಸಗಾರ, ಹಾಳಕುಸುಗಲ್, ನವಲಗುಂದ ಪಟ್ಟಣದ ಜೋಶಿ ಹಾಗೂ ಬಸ್ತಿ ಪ್ಲಾಟ್ನಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರದೇಶಗಳನ್ನು ಲಾಕ್ಡೌನ್ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದರು.
ಬಳಿಕ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಇದಕ್ಕೂ ಮುನ್ನ ತಾಲೂಕಿನ ಆರೇಕುರಹಟ್ಟಿ ಗ್ರಾಮದ ನವಲಗುಂದ ತಾಲೂಕು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ಪರಿಶೀಲಿಸಿದರು.
ತಹಸೀಲ್ದಾರ್ ನವೀನ ಹುಲ್ಲೂರ, ತಾಪಂ ಇಒ ಪವಿತ್ರಾ ಪಾಟೀಲ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಜಯಪಾಲ ಪಾಟೀಲ, ಬಿಇಒ ಗಿರೀಶ ಪದಕಿ, ಇತರರಿದ್ದರು.