ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ನವರಾತ್ರಿ ಉತ್ಸವ ಪೂಜಾನುಷ್ಠಾನ, ಷಟ್ಸ್ಥಲ, ಧ್ವಜಾರೋಹಣ ಮತ್ತು ನವರಾತ್ರಿ ಉತ್ಸವಕ್ಕೆ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಚಾಲನೆ ನೀಡಿದರು. ಕುಂತೂರಿನ ವೀರಸಿಂಹಾಸನದ ಷ.ಬ್ರ. ಶಿವಪ್ರಭು ಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು.
ನವರಾತ್ರಿ ಉತ್ಸವ ಪ್ರಯುಕ್ತ ವಿಜಯದಶಮಿವರೆಗೆ ಮಠದಲ್ಲಿ ಪ್ರತಿದಿನ ಮುಂಜಾನೆ 4ರಿಂದ ನವಗ್ರಹ, ಮೃತ್ಯುಂಜಯ ಪೂಜೆ, ತಿಲಾಭಿಷೇಕ, ಗೋಪೂಜೆ, ನಾಗದೇವತೆ ಪೂಜೆ, ಕಾಶಿ ಚಂದ್ರಮೌಳೇಶ್ವರ ಸ್ವಾಮಿಗೆ ಅಭಿಷೇಕ ಪೂಜೆ, ರಾಜೋಪಚಾರ, ದುರ್ಗಾಷ್ಠಮಿ ಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಅ.26ರ ಸೋಮವಾರದಿಂದ 7 ದಿನಗಳವರೆಗೆ ಶ್ರೀಗಳು ಮೌನಾನುಷ್ಠಾನ ಒಳಗಾಗುತ್ತಿದ್ದು, 9 ದಿನಗಳವರೆಗೆ ಉಪವಾಸ ಮಾಡಲಿದ್ದಾರೆ. ಸೆ.5 ರಂದು ಬನ್ನಿಪೂಜೆ ಸೆ.6 ರಂದು ನವರಾತ್ರಿ ಉತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ನೆರವೇರಲಿದೆ.