ಗಜೇಂದ್ರಗಡ: ಸಮೀಪದ ನೆಲ್ಲೂರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ವಿಭಾಗದಿಂದ ವಿವಿಧ ಜಾತಿಯ ಸಸಿಗಳ ಪೋಷಣೆ ಮಾಡುತ್ತಿದ್ದು, ಇಡೀ ಪರಿಸರ ಹಚ್ಚಹಸಿರಿನ ಸಸ್ಯಕಾಶಿಯಂತೆ ಕಂಗೊಳಿಸುತ್ತಿದೆ.
2019-20ನೇ ಸಾಲಿನ ತಾಲೂಕು ಹಸಿರೀಕರಣಕ್ಕಾಗಿ ಆರು ಎಕರೆ ಪ್ರದೇಶದಲ್ಲಿ 1,25,665ಕ್ಕೂ ಅಧಿಕ ಸಸಿಗಳನ್ನು ಬೆಳೆಸಲಾಗುತ್ತಿದೆ. ಎಳೆ ಸಸಿಗಳಿಗೆ ನೀರುಣಿಸಿ, ಗೊಬ್ಬರ ನೀಡಿ ದಷ್ಟಪುಷ್ಟವಾಗಿ ಬೆಳೆಸುವ ಮೂಲಕ ರೋಗ ಬಾರದಂತೆ ಇಲಾಖೆ ಸಿಬ್ಬಂದಿ ಎಚ್ಚರ ವಹಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ನರ್ಸರಿಯಲ್ಲಿ ಶ್ರೀಗಂಧ, ತೇಗ, ನೇರಳೆ, ಬೇವು, ಹೊಂಗೆ, ತಪ್ಸಿ, ಹೆಬ್ಬೇವು, ನಿಂಬೆ, ಕರಿಬೇವು, ನುಗ್ಗೆ, ಫೆಲ್ಟೋಫಾರ್ಮ್್ಮ ಮಹಾಗನಿ, ಹೊಂಗೆ, ಅರಳೆ, ಆಲ, ಹುಣಸೆ, ಬಸವನಪಾದ, ಹತ್ತಿ, ಪೇರಲ, ರಕ್ತಚಂದನ ಸೇರಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲು ಆರ್ಎಫ್ಒ ಪ್ರಕಾಶ ಪವಾಡಿಗೌಡ್ರ ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಕೃಷಿ ಅರಣ್ಯ: ರಾಷ್ಟ್ರೀಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಇಲಾಖೆಯ ಎಸ್ಎಂಎಎಫ್ ಯೋಜನೆಯಡಿ ಕೃಷಿ ಅರಣ್ಯ ಮಾಡಲು 25 ಸಾವಿರ ಹೆಬ್ಬೇವು, 50 ಸಾವಿರ ನಿಂಬೆ, ನುಗ್ಗೆ, ಕರಿಬೇವು, ಪೇರಲ, ಮಹಾಗನಿ ಸಸಿಗಳನ್ನು ಬೆಳೆಸಲಾಗಿದೆ. ಆಗ್ರೋ ಫಾರೆಸ್ಟರಿ ಯೋಜನೆಯಡಿ 90 ಸಾವಿರ ಸಸಿಗಳನ್ನು ಪೋಷಿಸಲಾಗುತ್ತಿದೆ. ರಸ್ತೆ ಬದಿ ನೆಡುತೋಪು, ಕೆರೆಯಂಗಳದ ನೆಡುತೋಪು ಅಭಿವೃದ್ಧಿಗಾಗಿ, ಸಂಘ-ಸಂಸ್ಥೆಗಳಿಗಾಗಿ ಸಸಿ ನೆಡುವ ಉದ್ದೇಶದಿಂದ ಒಟ್ಟು 24 ಸಾವಿರ ಸಸಿಗಳನ್ನು ಬೆಳೆಸಲಾಗುತ್ತದೆ ಎಂದು ಆರ್ಎಫ್ಒ ಪ್ರಕಾಶ ತಿಳಿಸಿದ್ದಾರೆ.
ಅರಣ್ಯೀಕರಣ ಮಾಡುವ ಉದ್ದೇಶ ಮತ್ತು ಅದರ ಲಾಭಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ರೈತರು ಈ ಬಗ್ಗೆ ಗಮನ ಹರಿಸಬೇಕು. ಒಟ್ಟು 1.5 ಲಕ್ಷ ಸಸಿಗಳ ವಿತರಣೆ ಗುರಿ ಹೊಂದಿದಲಾಗಿದೆ. ಜೂನ್ ಮೊದಲ ವಾರದಿಂದ ಸಸಿಗಳ ವಿತರಣೆ ಆರಂಭಗೊಳ್ಳಲಿದೆ. ರೈತರು ತಮ್ಮ ದಾಖಲಾತಿ ನೀಡಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಣಿ ಮಾಡಿ ಸಸಿಗಳನ್ನು ಪಡೆಯಬಹುದಾಗಿದೆ. ಕೆರೆಯಂಗಳದ ಬಳಿ ಸಸಿ ನೆಡಲು ಹೋದಾಗ ಸಹಕಾರ ಕೋರುತ್ತೇವೆ. ಜೂ. 1ರೊಳಗೆ ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಿ ಸಸಿಗಳನ್ನು ಪಡೆದುಕೊಳ್ಳಬಹುದು.
| ಪ್ರಕಾಶ ಪವಾಡಿಗೌಡ್ರ ಆರ್ಎಫ್ಒ.