ಕೊಡೇಕಲ್ : ಶಾಲೆಗೆ ಬಂದು ನಮ್ಮ ಸಮಸ್ಯೆ ಕೇಳಿ ಹೋಗಿತ್ತೀರಿಯೇ ವಿನಃ ಅವುಗಳಿಗೆ ಸ್ಪಂದಿಸುವುದಿಲ್ಲ ಎಂದು ಪ್ರೌಢಶಾಲಾ ವಿದ್ಯಾರ್ಥಿಗಳು ನಾರಾಯಣಪುರ ಗ್ರಾಮ ಪಂಚಾಯಿತಿ ವಿರುದ್ಧ ಆರೋಪ ಮಾಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಆಶ್ರಯದಲ್ಲಿ ನಾರಾಯಣಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಗ್ರಾಪಂ ಪಿಡಿಒ ಮತ್ತು ಪಂಚಾಯಿತಿ ವಿರುದ್ಧ ವಿದ್ಯಾರ್ಥಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಗೈದರು.
ಶಾಲೆಯಲ್ಲಿ ಶುದ್ಧವಾದ ಕುಡಿಯುವ ನೀರಿ ವ್ಯವಸ್ಥೆ ಇಲ್ಲ. ಸರಿಯಾದ ಬಿಸಿಯೂಟ ವ್ಯವಸ್ಥೆ ಇಲ್ಲ. ನಮಗೆ ಕೂಡಲು ಸರಿಯಾದ ಆಸನಗಳಿಲ್ಲ. ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲ. ಇದಲ್ಲದೆ ಇನ್ನೂ ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಮೊದಲು ಸರಿಪಡಿಸಬೇಕು ಎಂದು ಒತ್ತಾಯಿಸಿ, ನಾವು ಹೇಳಿದಾಗ ಈ ಎಲ್ಲ ಸಮಸ್ಯೆ ಪಟ್ಟಿಮಾಡಿಕೊಂಡು ಹೋಗುತ್ತೀರಿ. ಆಮೇಲೆ ಅವುಗಳಿಗೆ ಸ್ಪಂದಿಸುವುದನ್ನೇ ಮರೆತುಬಿಡುತ್ತೀರಿ ಎಂದು ಪಿಡಿಒ ಅವರಿಗೆ ಪ್ರಶ್ನೆ ಮಾಡಿದರು.
ನಂತರ ಮಾತನಾಡಿದ ಪಿಡಿಒ ಮಲ್ಲೇಶಪ್ಪಗೌಡ ಮಾಲಿ ಪಾಟೀಲ್, ಗ್ರಾಪಂ ಮಟ್ಟದಲ್ಲಿ ಪರಿಹರಿಸಬಹುದಾದ ನೀರಿನ ವ್ಯವಸ್ಥೆ, ಶೌಚಾಲಯ ದುರಸ್ತಿ, ಕೊಳವೆಬಾವಿ ದುರಸ್ತಿ ಶೀಘ್ರ ಮಾಡಲಾಗುವುದು. ಉಳಿದ ಸಮಸ್ಯೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜೇಂದ್ರಕುಮಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹಣಮಂತ ಕಬಡರ ಅಧ್ಯಕ್ಷತೆ ವಹಿಸಿದ್ರು. ಮುಖ್ಯಗುರು ಶಂಕರ ಲಮಾಣಿ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಡುವಿನಮನಿ, ಗ್ರಾಪಂ ಉಪಾಧ್ಯಕ್ಷೆ ಚಾಂದುಬಾಯಿ ಖೂಬಣ್ಣ, ಪೊಲೀಸ್ ಇಲಾಖೆಯ ಎಚ್.ಸಿ.ಸೋಮನಗೌಡ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಕರ್ಯದರ್ಶಿ ಗುರುರಾಜ ಜೋಶಿ, ಹುಲಗಪ್ಪಗೌಡ, ಹುಸೇನ್ ಸಾಬ್, ವಿರೇಶ ಹಿರೇಮಠ, ಗೌಸೋದ್ದೀನ್, ಚಂದಪ್ಪ, ಮಡೆಪ್ಪ, ಪಾಶಾ, ಜಂಪಣ್ಣ ಇತರರಿದ್ದರು.
ಶಿಕ್ಷಕರಾದ ಅನಿಲ್ ಬೇತ್ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ವಂದಿಸಿದರು. ಬಸಪ್ಪ ನಿರೂಪಣೆ ಮಾಡಿದರು.