ಮುಂಡರಗಿ: ಮರಳು ಅಕ್ರಮ ಸಂಗ್ರಹ ಕುರಿತು ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ತುಂಗಭದ್ರಾ ನದಿ ಭಾಗದಲ್ಲಿ ಗುತ್ತಿಗೆ ಪಡೆದಿರುವ ಮರಳು ಸಂಗ್ರಹ ಘಟಕ ಎಷ್ಟಿವೆ? ಅಕ್ರಮ ಮರಳು ಸಂಗ್ರಹ ಮಾಡಿದವರ ಮೇಲೆ ಟಾಸ್ಕ್ಫೋರ್ಸ್ ಕಮಿಟಿಯಿಂದ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಅವರನ್ನು ಸದಸ್ಯ ರುದ್ರಗೌಡ ಪಾಟೀಲ ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಶಿರಸ್ತೇದಾರ್, ಅಕ್ರಮ ಮರಳು ಗಣಿಗಾರಿಕೆ ತಡೆಯುವ ಕುರಿತು ಟಾಸ್ಕ್ಫೋರ್ಸ್ ಸಭೆಯಲ್ಲಿ ರ್ಚಚಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.
ತುಂಗಭದ್ರಾ ನದಿ ಭಾಗದ ಮರಳು ಸಂಗ್ರಹ ಘಟಕಗಳಿಂದ ಆಯಾ ಭಾಗದ ಗ್ರಾ.ಪಂ.ಗೆ ರಾಯಲ್ಟಿ ತುಂಬಬೇಕು. ಆದರೆ, ಕಳೆದ 3ವರ್ಷದಿಂದ ತುಂಬಿಲ್ಲ. ರಾಯಲ್ಟಿ ತುಂಬಿಸಬೇಕು ಎಂದು ರುದ್ರಗೌಡ ಪಾಟೀಲ ತಿಳಿಸಿದರು.
ಹಿರೇವಡ್ಡಟ್ಟಿ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಸದಸ್ಯ ವೆಂಕಪ್ಪ ಬಳ್ಳಾರಿ ಪ್ರಸ್ತಾಪಿಸಿದರು.
ಉತ್ತರಿಸಿದ ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ, ವಿಜಯಪುರ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಿರೇವಡ್ಡಟ್ಟಿ ವೈದ್ಯರು ಸೇರಿ ಕೆಲ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಹಿರೇವಡ್ಡಟ್ಟಿಗೆ ಬೇರೆ ಕೇಂದ್ರದ ವೈದ್ಯರನ್ನು ನೇಮಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ ಎಂದರು.
ತಾ.ಪಂ. ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಮಾತನಾಡಿ, ಬೆಳೆಹಾನಿ ಪರಿಹಾರ ಕುರಿತು ಏನೇ ವಿಷಯ ಇದ್ದರೂ ಸರಿಯಾಗಿ ಮಾಹಿತಿ ನೀಡಬೇಕು ಎಂದು ಶಿರಸ್ತೇದಾರ್ಗೆ ಸೂಚಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವೈ.ಎಚ್.ಜಾಲವಾಡಗಿ ಮಾತನಾಡಿ, ಲಾಕ್ಡೌನ್ನಿಂದ ಮಾರಾಟವಾಗದೇ ಹಾನಿಯಾದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಪರಿಹಾರಧನ ನೀಡಲಾಗುತ್ತಿದೆ. ಪ್ರತಿ ಹೆಕ್ಟೇರ್ ಹೂವು ಬೆಳೆಗೆ 25 ಸಾವಿರ ರೂ. ಪ್ರತಿ ಹೆಕ್ಟೇರ್ಹಣ್ಣು, ತರಕಾರಿಗೆ 15 ಸಾವಿರ ರೂ.ಪರಿಹಾರ ಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು. ತಾಪಂ ಇಒ ಎಸ್.ಎಸ್.ಕಲ್ಮನಿ, ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ಕುಸುಮಾ ಮೇಟಿ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಬಸಪ್ಪ ಮಲ್ಲನಾಯ್ಕರ, ಭರಮಪ್ಪ ನಾಗನೂರ, ತಿಪ್ಪವ್ವ ಕಾರಬಾರಿ ಉಪಸ್ಥಿತರಿದ್ದರು.