ಕೊಪ್ಪಳ: ನಗರದ ಕೇಂದ್ರ ಬಿಂದು ನಗರಸಭೆ ನವೀಕರಣಕ್ಕೆ ಸಾಮಾನ್ಯ ಸಭೆಯಲ್ಲಿ ನಡಾವಳಿ ಅನುಮೋದಿಸಲಾಗಿದೆ. ಆರಂಭಿಕವಾಗಿ 50ಲಕ್ಷ ರೂ. ಅನುದಾನದಲ್ಲಿ ಸಿವಿಲ್ ಕಾಮಗಾರಿ ಆರಂಭಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ನಗರಸಭೆ ಕಟ್ಟಡವನ್ನು ಕಾಗದ ರಹಿತ ಆಡಳಿತಕ್ಕೆ ಒಳಪಡಿಸಬೇಕಿದೆ. ಸರ್ಕಾರದಿಂದಲೂ ಈ ಬಗ್ಗೆ ನಿರ್ದೇಶನವಿದೆ. ಕಚೇರಿ ನವೀಕರಣಕ್ಕೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಹೀಗಾಗಿ ನಗರಸಭೆ ನಿಧಿಯಿಂದ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಬಗ್ಗೆ ನಡಾವಳಿ ರಚಿಸಿ ಜಿಲ್ಲಾಧಿಕಾರಿಗಳಿಗೆ ಪ್ರತಿ ಕಳಿಸಲಾಗಿದೆ. ಕಾಮಗಾರಿ ಅಂದಾಜು ಪತ್ರಿಕೆ ತಯಾರಿಸುವಾಗ 2.5 ಕೋಟಿ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ ಎಂದರು.
ನಗರಸಭೆ ಸದಸ್ಯ ಮಹೇಂದ್ರ ಚೋಪ್ರಾ ಮಾತನಾಡಿ, ಎಲ್ಲ ಸದಸ್ಯರು ಒಪ್ಪಿಕೊಂಡು ಸಹಿ ಮಾಡಿದ್ದೇವೆ. ಸೋಮಣ್ಣ ಹಳ್ಳಿ ಡಿಸಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಡಿಯುಡಿಸಿ ಪಿಡಿ ಕಾವ್ಯರಾಣಿ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ. ಪೌರಾಯುಕ್ತ ಎಚ್.ಎನ್.ಭಜಕ್ಕನವರ ಸರಿಯಾದ ಸಮಯಕ್ಕೆ ಉತ್ತರ ನೀಡಿಲ್ಲ. ನಾವು ಸಹ ತೆರಳಿ ಮಾಹಿತಿ ನೀಡಿದ್ದೇವೆ.
ನಗರಸಭೆಗೆ 50ಲಕ್ಷ ರೂ. ವರೆಗೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಅದಕ್ಕೆ ಕಾಮಗಾರಿ ಕೈಗೊಂಡಿದ್ದೇವೆ ಎಂದು ಮನವರಿಕೆ ಮಾಡಿದ್ದೇವೆ. ಅವರೂ ಒಪ್ಪಕೊಂಡಿದ್ದಾರೆ. ನಮ್ಮ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಜನತೆಗೆ ಅನುಮಾನ ಬರುವಂತಾಗಿದೆ ಎಂದು ತಿಳಿಸಿದರು.