ಚಿತ್ರದುರ್ಗ: ಕೋಟೆನಗರಿಯ ವಿವಿಧೆಡೆ ವರುಣನ ಸಿಂಚನವಾಗಿದ್ದು, ಕೆಲವೆಡೆ ಗುಡುಗು ಸಹಿತ ಶುಕ್ರವಾರ ಮಳೆ ಸುರಿಯಿತು. ಹೀಗಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.
ಕೆಲ ತಗ್ಗು ಪ್ರದೇಶದ ರಸ್ತೆಗಳಲ್ಲಿ ಇದ್ದಕ್ಕಿದ್ದಂತೆ ರಭಸವಾಗಿ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದವು. ಇದರಿಂದಾಗಿ ಹೊರಬಂದ ಕೊಳಚೆ ನೀರಿನೊಂದಿಗೆ ತ್ಯಾಜ್ಯ ಮಾರ್ಗವನ್ನು ಸಂಪೂರ್ಣ ಆವರಿಸಿತು. ಹೀಗಾಗಿ ವಾಹನ ಸವಾರರು, ಜನ ಪರದಾಡುವಂತಾಯಿತು.
ಮಧ್ಯಾಹ್ನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 3ರ ನಂತರ ಕೆಲ ಭಾಗಗಳಲ್ಲಿ ಬಿಸಿಲು ಮಳೆ ಸುರಿಯಿತು. ನಗರದಲ್ಲಿ ಇನ್ನೂ ಕೆಲವೆಡೆ ಸಂಜೆ 4.30ರಿಂದ ಹತ್ತದಿನೈದು ನಿಮಿಷ ಬಿರುಸಿನ ಮಳೆಯಾಯಿತು. ಮಳೆ ಬಿಟ್ಟ ನಂತರ ಶೆಕೆಯೂ ಹೆಚ್ಚಾಯಿತು. ಈರಜ್ಜನಹಟ್ಟಿ ಗ್ರಾಮದಲ್ಲಿ ಕೆಲ ನಿಮಿಷ ಹದ ಮಳೆಯಾಯಿತು.