ವಿಜಯಪುರ: ಧಾರಾಕಾರ ಮಳೆಯಿಂದಾಗಿ ವಾರ್ಡ್ ನಂ.14ರಲ್ಲಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆ ಶಾಸಕ ಡಾ.ದೇವಾನಂದ ಚವಾಣ್ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.14ರ ಶಿಕಾರಖಾನೆ ಖಾವಿ ಪ್ಲಾಟ್ನಲ್ಲಿ ಮಳೆ ನೀರು ನುಗ್ಗಿದ್ದರಿಂದ ಅಪಾರ ಹಾನಿಯಾಗಿದೆ. ದಿನ ಬಳಕೆ ಸಾಮಗ್ರಿಗಳು, ದಿನಸಿ ಹಾಳಾಗಿವೆ. ಚರಂಡಿ ನೀರು ಮನೆಗಳಿಗೆ ನುಗ್ಗಿ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ವಿಷಯ ತಿಳಿದ ಶಾಸಕ ಡಾ.ದೇವಾನಂದ ಚವಾಣ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಗಟಾರ್ಗಳನ್ನು ರಿಪೇರಿ ಮಾಡದ ಹಿನ್ನೆಲೆ ಈ ಸಂಕಷ್ಟ ಎದುರಾಗಿದೆ. ಈ ಹಿಂದೆಯೇ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಪರಿಣಾಮ ಮಳೆ ನೀರಿನಿಂದ ಜನ ತೊಂದರೆಗೆ ಸಿಲುಕಬೇಕಾಯಿತು. ಇನ್ನಾದರೂ ತ್ವರಿತವಾಗಿ ಪರಿಹಾರ ಕೈಗೊಳ್ಳಲು ಶಾಸಕ ದೇವಾನಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಂತ್ರಸ್ತರಿಗೆ ತುರ್ತಾಗಿ ಇರಲು ಗೋಳಗುಮ್ಮಟ ಹಿಂಭಾಗದ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಯಿತು. ತಾತ್ಕಾಲಿಕವಾಗಿ ಪರಿಹಾರ ಹಣ ಕಲ್ಪಿಸುವುದಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.