ಕಳಸ: ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವನಳ್ಳ ಸಮೀಪ ಕಳ್ಳರಪಾಳು ಪ್ರದೇಶದ ಉಳ್ಳೇತರದಲ್ಲಿ ಬುಧವಾರ ಧರೆ ಕುಸಿದಿದೆ. ಗಿರಿಜನ ಕುಟುಂಬಕ್ಕೆ ಮನೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಸಂಜೆ ಸುರಿದ ಮಳೆಗೆ ಕವನಳ್ಳದಿಂದ ಕಳ್ಳರಪಾಲು ಗೊರಸಿನತೋಟಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಧರೆ ಕುಸಿದಿದ್ದು ಉದಯ ಎಂಬುವರ ಮನೆ ಮೇಲೆ ಮಣ್ಣು ತುಂಬಿಕೊಳ್ಳುತ್ತಿದೆ. ಜಮೀನಿಗೂ ಹಾನಿಯಾಗಿದ್ದು ಅಡಕೆ, ಕಾಫಿ ಗಿಡಗಳು ಮಣ್ಣು ಪಾಲಾಗಿವೆ.
ಜೆಸಿಬಿಯಿಂದ ಮಣ್ಣು ತೆರವು ಮಾಡಿ ಮನೆ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆಯಾದರೂ ಸತತವಾಗಿ ಮಣ್ಣು ಜರಿದು ಬರುತ್ತಿರುವುದರಿಂದ ಕಾರ್ಯಾಚರಣೆ ವಿಫಲವಾಗಿದೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಹೊರನಾಡು ಪಿಡಿಒ ಅರುಣ್ ಹಾನಿಯನ್ನು ವೀಕ್ಷಿಸಿದರು.