ಸಿದ್ದಾಪುರ: ತಾಲೂಕಿನಾದ್ಯಂತ ಬುಧವಾರ ತಡರಾತ್ರಿ ಗಾಳಿ-ಮಳೆ ಅಬ್ಬರಿಸಿದ್ದರಿಂದ ಸಾಕಷ್ಟು ಹಾನಿ ಉಂಟಾಗಿದೆ. ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೂರಾರು ಮರಗಳು ಧರೆಗುರುಳಿವೆ.
ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ಕಾನಸೂರು-ತ್ಯಾಗಲಿ ನಡುವೆ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ರಸ್ತೆ ಮೇಲೆ ವಿದ್ಯುತ್ ಕಂಬಗಳು, ತಂತಿಗಳು ಬಿದ್ದು ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಗುರುವಾರ ಬೆಳಗ್ಗೆ ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಮನೆಗೆ ಹಾನಿ: ಮನಮನೆ ಗ್ರಾಮದ ದೇವೆಂದ್ರ ಮಾಸ್ತಾ್ಯ ನಾಯ್ಕ ಎನ್ನುವವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಮಂಜಪ್ಪ ಮೈಲಾ ನಾಯ್ಕ ಎನ್ನುವವರ ಕೊಟ್ಟಿಗೆ ಮನೆ ಕುಸಿದಿದೆ. ಪಪಂ ವ್ಯಾಪ್ತಿಯ ಹಣಜೀಬೈಲ್ನ ಮಂಜುನಾಥ ವೆಂಕಟೇಶ ನಾಯ್ಕ ಎನ್ನುವವರ ಮನೆ ಹಾಗೂ ತೆಂಗಿನಮರಕ್ಕೆ ಸಿಡಿಲು ಬಡಿದಿದ್ದು ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
ಗುರುವಾರ ರಾತ್ರಿ 22 ಮಿ.ಮೀ ಮಳೆ ಸುರಿದಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.