More

    ದೇಶಪ್ರೇಮದ ಪ್ರತೀಕ ಕೊರಡೂರ ಗ್ರಾಮ


    ಹಾವೇರಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ತಾಲೂಕಿನ ಕೊರಡೂರ ಗ್ರಾಮದಲ್ಲಿ ಸೇವಾಶ್ರಮದ ಆವರಣವನ್ನು ಸಾಮೂಹಿಕ ಶ್ರಮದಾನ ಮೂಲಕ ಬುಧವಾರ ಸ್ವಚ್ಛಗೊಳಿಸಲಾಯಿತು.
    ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುತಾತ್ಮ ಮೈಲಾರ ಮಹದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಗ್ರಾಮದ ಯುವಕರು, ಅಧಿಕಾರಿಗಳು ಆವರಣವನ್ನು ಸ್ವಚ್ಛಗೊಳಿಸಿದರು.
    ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸ್ವಾತಂತ್ರ್ಯ ಯೋಧ ಮೈಲಾರ ಮಹಾದೇವಪ್ಪನವರ ಕರ್ಮಭೂಮಿ ಕೊರಡೂರ ಗ್ರಾಮ. ಇದು ದೇಶ ಪ್ರೇಮದ ಪ್ರತೀಕವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಟಗಾರರು ಇಲ್ಲಿ ತಂಗುತ್ತಿದ್ದರು. ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕ ಏಕೈಕ ವ್ಯಕ್ತಿ ಮಹಾದೇವಪ್ಪ. ಇಂತಹ ಇತಿಹಾಸವುಳ್ಳ ಈ ಆಶ್ರಮ ಪವಿತ್ರವಾದ ಸ್ಥಳ. ಈ ಸ್ಥಳವನ್ನು ಯುವಕರು ಜತನದಿಂದ ಕಾಪಾಡಿ, ಅಭಿವೃದ್ಧಿಪಡಿಸಬೇಕು. ಇದನ್ನು ಪ್ರವಾಸಿ ತಾಣವಾಗಿ ಬೆಳೆಸಬೇಕು ಎಂದರು.
    ಹುತಾತ್ಮ ಮೈಲಾರ ಮಹಾದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ವಿ.ಎನ್. ತಿಪ್ಪನಗೌಡ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳನ್ನು ಸಿದ್ಧಗೊಳಿಸುವುದು, ಪ್ರತಿಯೊಬ್ಬ ಯುವಕರು ಆರೋಗ್ಯವಂತ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡುವುದು, ಖಾದಿ ಉತ್ಪಾದನೆ, ಅಸ್ಪೃಶ್ಯತೆ ನಿವಾರಣೆ ಉದ್ದೇಶದಿಂದ ಈ ಆಶ್ರಮವನ್ನು ನಿರ್ವಿುಸಲಾಯಿತು. ಅಂದು ಇಲ್ಲಿ ನಿತ್ಯ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು. ಅಂದಿನ ಜನರಲ್ಲಿ ಜಾತಿಯ ಭಾವನೆಯಿರಲಿಲ್ಲ. ಇದನ್ನು ಕಾಪಾಡುವುದು ಯುವಜನತೆ ಕೈಯಲ್ಲಿದೆ ಎಂದರು. ತಾಪಂ ಇಒ ಡಿ.ಸಿ. ಬಸವರಾಜಪ್ಪ ಮಾತನಾಡಿದರು. ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಗ್ರಾಪಂ ಮಾಜಿ ಸದಸ್ಯ ಚನ್ನಪ್ಪ ಅರಳಿ, ಈರಣ್ಣ ಕೋರಿ ಮಾತನಾಡಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲರ್ದತಿ, ಪಿಡಿಒ ಶಾರದಾ ಜಾಲವಾಡಿ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಬಾಲೆಹೊಸೂರು, ಸದಸ್ಯರಾದ ಸಂಗಯ್ಯ ಕಿತ್ತೂರಮಠ, ಬಸವಂತಪ್ಪ ಕಾಳೆ, ಫಕೀರೇಶ ಕೋಡಬಾಳ, ಫಕೀರೇಶ ಅರಳಿ, ಸಂಗಣ್ಣ ಅರಳಿ, ಚನ್ನಪ್ಪ ಅರಳಿ ಇತರರಿದ್ದರು.
    ಇಂದಿನ ಯುವ ಪೀಳಿಗೆಗೆ ಆಶ್ರಮ ಸ್ಪೂರ್ತಿದಾಯಕವಾಗಿದೆ. ನರೇಗಾ ಸೇರಿ ತಾಪಂ ಹಾಗೂ ಗ್ರಾಪಂನ ವಿವಿಧ ಅನುದಾನದಲ್ಲಿ ಸೇವಾಶ್ರಮದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗುವುದು. ಆವರಣದಲ್ಲಿ ಉದ್ಯಾನ, ಐತಿಹಾಸಿಕ ಬಾವಿಯ ಪುನಶ್ಚೇತನ ಸೇರಿ ಗಾಂಧೀಜಿಯವರ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು.
    | ಡಿ.ಸಿ. ಬಸವರಾಜಪ್ಪ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts