ಹುಬ್ಬಳ್ಳಿ: ಲಾಕ್ಡೌನ್ನಿಂದಾಗಿ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಕರೆತಂದ ದೆಹಲಿ-ಹುಬ್ಬಳ್ಳಿ-ಕಲಬುರಗಿ -ಬೆಂಗಳೂರು ಶ್ರಮಿಕ ಎಕ್ಸ್ಪ್ರೆಸ್ ರೈಲಿನಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಒಟ್ಟು 277 ಜನ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವಲಸೆ ಕಾರ್ವಿುಕರು ಶನಿವಾರ ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿದರು.
ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದ ಶ್ರಮಿಕ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ದೆಹಲಿಯಿಂದ ಕಳೆದ ಗುರುವಾರ ರಾತ್ರಿ 9.15ಕ್ಕೆ ಹೊರಟಿದ್ದು, ಶನಿವಾರ ನೇರವಾಗಿ ಹುಬ್ಬಳ್ಳಿಗೆ ಆಗಮಿಸಿತು. ಬೆಳಗ್ಗೆ 7.10ಕ್ಕೆ ಬರಬೇಕಿದ್ದ ರೈಲು, ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಿದ್ದು ಬೆಳಗ್ಗೆ ಸುಮಾರು 11.15ಕ್ಕೆ.
11.40ಕ್ಕೆ ಶ್ರಮಿಕ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿಯಿಂದ ಕಲಬುರಗಿ-ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಹುಬ್ಬಳ್ಳಿಗೆ ಆಗಮಿಸಿದ್ದ ಎಲ್ಲ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳೊಂದಿಗೆ ಇದ್ದ ಕುಟುಂಬದ ಸದಸ್ಯರ ವಿವರವನ್ನು ನಿಲ್ದಾಣದ ಆವರಣದಲ್ಲಿ ಪಡೆದುಕೊಂಡು, ಅವರ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಯಿತು.
ದೆಹಲಿಯಿಂದ ಆಗಮಿಸಿದ್ದ ಧಾರವಾಡ ಜಿಲ್ಲೆಯ 41 ಜನರನ್ನು ಸಾರಿಗೆ ಸಂಸ್ಥೆ ಬಸ್ ಮೂಲಕ ಕ್ವಾರಂಟೈನ್ಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಾರಿಗೆ ಬಸ್ ಮೂಲಕ ಕಳುಹಿಸಲಾಯಿತು. ಬಾಗಲಕೋಟೆ (13), ವಿಜಯಪುರ (28), ಬೆಳಗಾವಿ (46), ಚಿತ್ರದುರ್ಗ (7), ಚಿಕ್ಕಮಗಳೂರು (4), ದಕ್ಷಿಣ ಕನ್ನಡ (20), ದಾವಣಗೆರೆ (8), ಗದಗ (3), ಹಾಸನ (13), ಹಾವೇರಿ (13), ಕೊಪ್ಪಳ್ಳ (10), ಶಿವಮೊಗ್ಗ (66), ಉತ್ತರ ಕನ್ನಡ ಜಿಲ್ಲೆಯ ಐವರು ಪ್ರಯಾಣಿಕರನ್ನು ಸಾರಿಗೆ ಸಂಸ್ಥೆ ಬಸ್ಗಳ ಮೂಲಕ ಕಳುಹಿಸಲಾಯಿತು. ದೆಹಲಿಯಿಂದ ಬಂದಿಳಿದವರನ್ನು ಒಟ್ಟು 10 ಬಸ್ಗಳಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಳುಹಿಸಲಾಯಿತು. ರಾಷ್ಟ್ರ ರಾಜಧಾನಿಯಿಂದ ಬಂದ ಎಲ್ಲರನ್ನೂ ಅವರವರ ಜಿಲ್ಲೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ.
ಬಸ್ ಏರುವ ಮುಂಚೆ ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಸ್ಯಾನಿಟೈಸರ್ ಹಾಕಲಾಯಿತು. ಜಿಲ್ಲಾಡಳಿತದಿಂದ ಉಪಾಹಾರದ ಪ್ಯಾಕೆಟ್, ಬಿಸ್ಕಿಟ್ ಹಾಗೂ ನೀರಿನ ಬಾಟಲಿ ನೀಡಲಾಯಿತು. ದೆಹಲಿಯಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಹುಬ್ಬಳ್ಳಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.