ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 10ನೇ ವಾರ್ಷಿಕ ಘಟಿಕೋತ್ಸವ, ಶಿವಗಂಗೋತ್ರಿಯ ಜ್ಞಾನಸೌಧ ಕಟ್ಟಡದಲ್ಲಿ ಫೆ.28ರಂದು ಬೆಳಗ್ಗೆ 10-15ಕ್ಕೆ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅಧ್ಯಕ್ಷತೆಯಲ್ಲಿ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಳ್ಳುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್.ಶಿವಣ್ಣ (ಮರಣೋತ್ತರ) ಹಾಗೂ ಹರಪನಹಳ್ಳಿಯ ಶಿಕ್ಷಣಪ್ರೇಮಿ ಟಿ.ಎಂ. ಚಂದ್ರಶೇಖರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಹೇಳಿದರು.
ಸ್ನಾತಕ- ಸ್ನಾತಕೋತ್ತರ ಪದವಿಗಳಲ್ಲಿ 32 ಹುಡುಗಿಯರು, 13 ಹುಡುಗರು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡಿದ್ದಾರೆ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ಬಿ. ಹಾಲಮ್ಮ, ಸ್ನಾತಕೋತ್ತರ ಜೀವ ರಸಾಯನಶಾಸ್ತ್ರ ವಿಭಾಗದ ಕೆ. ಅರುಣ್ ಶರ್ಮ ತಲಾ ಐದು ಸ್ವರ್ಣ ಪದಕ ಪಡೆದಿದ್ದಾರೆ ಎಂದು ವಿವರಿಸಿದರು.
ಸ್ನಾತಕ-ಸ್ನಾತಕೋತ್ತರ ವಿಭಾಗದಲ್ಲಿ 8380 ಮಹಿಳೆಯರು, 5598 ಪುರುಷರು ಸೇರಿ ಒಟ್ಟು 13978 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ 14 ಜನರಿಗೆ ಪಿ.ಎಚ್ಡಿ, ಒಬ್ಬರಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಗುವುದು. ಪರೀಕ್ಷಾಂಗ ಕುಲಸಚಿವ ಶಿವಶಂಕರ್ ಇದ್ದರು.