ದಾವಣಗೆರೆ: ಚಂದನವನದ ನಟ ಶ್ರೀಮುರಳಿ ಜನ್ಮದಿನದ ಪ್ರಯುಕ್ತ ‘ಪರಾಕ್’ ಸಿನಿಮಾ ಘೋಷಣೆಯಾಗಿದ್ದು, ದಾವಣಗೆರೆ ಪ್ರತಿಭೆಗಳು ಚಿತ್ರ ನಿರ್ಮಾಣ ಮಾಡುತ್ತಿರುವುದಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಶಿವರತನ್ ಹೇಳಿದರು.
ಬ್ರಾೃಂಡ್ ಕಾರ್ಪೋರೇಟ್ಸ್ ಪ್ರೊಡಕ್ಷನ್ ಪ್ರೈ.ಲಿ. ಸಂಸ್ಥೆಯಡಿ ನಿರ್ಮಿಸಲಾಗುತ್ತಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರವನ್ನು ನಗರದ ಪ್ರತಿಭೆ ಹಾಲೇಶ್ ಕೋಗುಂಡಿ ನಿರ್ದೇಶಿಸುತ್ತಿರುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಹಲವು ಕಿರುಚಿತ್ರ ನಿರ್ದೇಶಿಸಿ ಅನುಭವ ಹೊಂದಿರುವ ಹಾಲೇಶ್ ಅವರು ಪರಾಕ್ ಚಿತ್ರದ ಮೂಲಕ ಸಿನಿಮಾ ನಿರ್ದೇಶನಕ್ಕೆ ಮೊದಲ ಹೆಜ್ಜೆ ಹಾಕಿದ್ದಾರೆ. ಅಖಿಲೇಶ್ ಕೋಗುಂಡಿ ಹಾಗೂ ಆಶಿಕ್ ಎಂ.ಜಿ. ಬಕ್ಕೇಶ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಎಂದರು.
ನಟ ಶ್ರೀಮುರುಳಿ ಜನ್ಮದಿನಕ್ಕೆ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಪರಾಕ್ ಬಳಗವು ಮೇ ಅಥವಾ ಜೂನ್ ತಿಂಗಳಲ್ಲಿ ಚಿತ್ರೀಕರಣ ನಡೆಸಲಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಚಿತ್ರದ ಧ್ವನಿ ಸುರುಳಿ ಅದ್ದೂರಿ ಯಾಗಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಸಿನಿಮಾ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ದಾವಣಗೆರೆಯ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ಚಿತ್ರದ ಹಲವು ವಿಭಾಗಗಳಲ್ಲಿ ದಾವಣಗೆರೆ ಪ್ರತಿಭೆಗಳು ಸಾಥ್ ನೀಡಲಿದ್ದಾರೆ. ಜಿಲ್ಲೆಯ ಜನತೆ ಚಿತ್ರತಂಡಕ್ಕೆ ಬೆಂಬಲ ನೀಡಬೇಕು ಎಂದು ಕೋರಿದರು.
ಕಾರ್ತಿಕ್ ಹಿರೇಮಠ್, ಸಂತೋಷ್ ಏಕಬೋಟೆ, ಮಹೇಶ್ ಮಾಯಾ, ಶಿವಪ್ರಕಾಶ್ ಪೂಜಾರಿ, ಷಣ್ಮುಖ ಸುದ್ದಿಗೋಷ್ಠಿಯಲ್ಲಿದ್ದರು.
—