ಮುಳಬಾಗಿಲು: ಕಾಂಗ್ರೆಸ್ ಬೆಂಬಲಿಸಿಕೊಂಡು ಬರುತ್ತಿದ್ದ ದಲಿತ ಮುಖಂಡರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಗಿಸಿ, ದಲಿತರನ್ನು ಅಧಿಕಾರದಿಂದ ದೂರ ಇಟ್ಟಿರುವುದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಕುರುಡುಮಲೆ ವಿನಾಯಕ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ಗೆ ವಲಸೆ ಬಂದು ಮಲ್ಲಿಕಾರ್ಜುನ ರ್ಖಗೆ ಅವರಿಗೆ ಸಿಗಬೇಕಾದ ವಿರೋಧ ಪಕ್ಷದ ನಾಯಕತ್ವ ಪಡೆದು ಉಪ ಮುಖ್ಯಮಂತ್ರಿಯಾಗಿದ್ದ ಜಿ.ಪರಮೇಶ್ವರ್ ಅವರು ಸಿಎಂ ಆಗುವುದನ್ನು ತಪ್ಪಿಸುವ ಮೂಲಕ ದಲಿತರಿಗೆ ಮೋಸ ಮಾಡಿದ್ದಾರೆ ಎಂದರು.
ಸಿದ್ಧರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾಗದೇ ಇದ್ದಿದ್ದರೆ, ಅವರ ಹೆಸರು ಇಂದು ಯಾರಿಗೂ ನೆನಪೇ ಇರುತ್ತಿರಲಿಲ್ಲ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದು ಸಭೆಯಲ್ಲಿ ಸಿದ್ದು ಅವರನ್ನು ಕಳ್ಳರೆಂದು ಕರೆಯುತ್ತಾರೆ, ಮಾಜಿ ಸಚಿವೆ ಮೋಟಮ್ಮ ಅವರು ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಿದ್ದಕ್ಕೆ ನನ್ನ ಭಾಗ್ಯದ ಬಾಗಿಲು ಮುಚ್ಚಿಹೋಯಿತು ಎಂದಿದ್ದಾರೆ. ಇಂತಹ ಹಲವು ಉದಾಹರಣೆಗಳು ಸಿದ್ಧು ವಿರುದ್ಧ ಪಕ್ಷದಲ್ಲಿ ಸಿಗುತ್ತದೆ ಎಂದು ಟೀಕಿಸಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಅತ್ಯಂತ ಬುದ್ಧಿವಂತರಾಗಿದ್ದರೂ ಕಾಂಗ್ರೆಸ್ ಅವರನ್ನು ಸೋಲಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರು ಹೇಳಿರುವಂತೆ “ಕಾಂಗ್ರೆಸ್ ಪಕ್ಷ ಸುಡುವ ಮನೆ’ ಎಂಬ ಮಾತು ಸತ್ಯವಾಗಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನನ್ನ ಕಾರ್ಯಕ್ಷೇತ್ರವಾಗಿದೆ. ಈ ಬಾರಿ ಕೋಲಾರ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವ ಗುರಿಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಗೂ ಮೊದಲು ಕುರುಡುಮಲೆ ವಿನಾಯಕ ನಗರದ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲರೆಡ್ಡಿ, ಖಜಾಂಚಿ ಕೆ.ಜಿ.ವೆಂಕಟರಮಣ, ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಕೆ.ಅಶೋಕ್, ನಗರ ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ನಗರಸಭೆ ಸದಸ್ಯ ಎಂ.ಪ್ರಸಾದ್, ಮುಖಂಡರಾದ ಶೀಗೇಹಳ್ಳಿ ಸುಂದರ್, ಎಚ್.ಎಸ್.ಹರೀಶ್, ಮೈಕ್ ಶಂಕರ್, ರಮೇಶ್, ಎಂ.ಪಿ.ಅನಿಲ್ ಕುಮಾರ್, ಮಂಜುನಾಥ್, ಪ್ರಕಾಶ್ರೆಡ್ಡಿ ಇದ್ದರು.