ದಾವಣಗೆರೆ: ಮೂವರು ದರೋಡೆಕೋರರ ಮೇಲೆ ಲಾರಿ ಹಾಯಿಸಿ ಕೊಲೆ ಮಾಡಿದ ಆರೋಪದಡಿ ಉತ್ತರಪ್ರದೇಶ ರಾಜ್ಯದ ಆರೋಪಿ, ಲಾರಿ ಚಾಲಕ ಭೋಲೆ ಯಾದವ ಹಾಗೂ ದರೋಡೆಕೋರ ತಂಡದ ನಾಗರಾಜ, ಗಣೇಶ, ರಾಹುಲ್ ನನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಡಿಸಿಐಬಿ ವಿಭಾಗದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ. 11ರಂದು ಲಾರಿ ಚಾಲಕನ ಮೇಲೆ ಹಲ್ಲೆಮಾಡಿ, ಬೆದರಿಸಿದ ದಾವಣಗೆರೆ ಶ್ರೀರಾಮನಗರ ವಾಸಿ ಆರು ಮಂದಿ ದರೋಡೆಕೋರರ ತಂಡ 8 ಸಾವಿರ ರೂ., ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿತ್ತು.
ಈ ನಡುವೆ ದರೋಡೆಕೋರರು ತಪ್ಪಿಸಿಕೊಳ್ಳಲು ಮುಂದಾದಾಗ ಅವರಿದ್ದ ಬೈಕ್ ಗಳ ಮೇಲೆ ಲಾರಿ ಚಾಲಕನು ಲಾರಿ ಹಾಯಿಸಿದ್ದಾನೆ. ಒಂದು ಬೈಕಿನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವುಕುಮಾರ, ಸಂದೇಶ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇತರೆ ಮೂವರು ಗಾಯಗೊಂಡು ಪರಾರಿಯಾಗಿದ್ದರು.
ಚೆನ್ನೈನಲ್ಲಿದ್ದ ಆರೋಪಿ ಲಾರಿ ಚಾಲಕ ಹಾಗೂ ಲಾರಿಯನ್ನು ಪತ್ತೆ ಮಾಡಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಎಎಸ್ಪಿ ರಾಮಗೊಂಡ ಬಿ ಬಸರಗಿ, ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಪಿ.ಐ. ಲಿಂಗನಗೌಡ ನೆಗಳೂರು, ಎಚ್.ಪಿ. ನಾರಪ್ಪ, ದೇವೇಂದ್ರನಾಯ್ಕ, ಅಣ್ಣಯ್ಯ, ಮಂಜುನಾಥ, ಮಹಮ್ಮದ್ ಯೂಸಫ್ ಅತ್ತಾರ್, ನಾಗರಾಜಯ್ಯ ಮತ್ತ ಡಿ.ಸಿ.ಐ.ಬಿ ವಿಭಾಗದ ಸಿಬ್ಬಂದಿ ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ಅಶೋಕ, ಸುರೇಶ, ಮಲ್ಲಿಕಾರ್ಜುನ, ರಮೇಶನಾಯ್ಕ, ನಟರಾಜ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜು ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಸಿ.ಬಿ.ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
…