ನಿಪ್ಪಾಣಿ: ನಗರದಲ್ಲಿ ಕಾರ್ಯನಿರ್ವಹಿಸಲು ತೆರಳುತ್ತಿರುವ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗೆ ಥಳಿಸಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಮೇ1ರಂದು ಗಳತಗಾ ಗ್ರಾಮದಲ್ಲಿ ಕೋವಿಡ್-19 ದೃಢಪಟ್ಟವರ ಮನೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪೋಸ್ಟರ್ ಅಂಟಿಸಲು ಮತ್ತು ಕ್ವಾರಂಟೈನ್ ವಾಚ್ ಅಪ್ ಕಾರ್ಯನಿರ್ವಹಿಸಲು ಗಳತಗಾ ಗ್ರಾಮಕ್ಕೆ ತೆರಳುವಾಗ ನಿಪ್ಪಾಣಿ ಬಸ್ ನಿಲ್ದಾಣದ ಬಳಿ ಪೊಲೀಸರು ಬೈಕ್ ತಡೆದು ಪ್ರಶ್ನಿಸಿದ್ದರು. ಗ್ರಾಮಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಹರಿಜನ ಗುರುತಿನ ಚೀಟಿ ತೋರಿಸಿ ಕಾರ್ಯನಿರ್ವಹಿಸಲು ಹೊರಟಿದ್ದಾಗಿ ತಿಳಿಸಿದರೂ ಪೋಲಿಸರು ಅವರಿಗೆ ಲಾಠಿಯಿಂದ ಥಳಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ತಪಾಸಣೆ ವೇಳೆ ಗುರುತಿನ ಚೀಟಿ ನೀಡಿ, ತಹಸೀಲ್ದಾರ್ರಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಬಲವಂತವಾಗಿ ಮೊಬೈಲ್ ಕಸಿದುಕೊಂಡು ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಮನವಿಯಲ್ಲಿ ಖಂಡಿಸಲಾಗಿದೆ. ಸಂಘದ ಪದಾಧಿಕಾರಿಗಳಾದ ಎನ್.ಆರ್.ಪಾಟೀಲ, ಎಸ್.ವಿ.ಗವಿ, ಆರ್.ಎಂ.ಹಂಜಿ, ಮನೋಜ ಕಾಂಬಳೆ, ಆನಂದ ಮಡಿವಾಳರ, ಎಂ.ಎ.ಮುಲ್ಲಾ, ಉಮೇಶ ಕೋಳಿ, ಸಂತೋಷ ಗಸ್ತಿ ಇತರರಿದ್ದರು.