More

    ತ್ಯಾಜ್ಯ ಸೇರ್ಪಡೆಯಿಂದ ಕಪ್ಪಾದ ಕೆರೆ ನೀರು, ವಿನಾಶದ ಅಂಚಿನಲ್ಲಿ ದೊಡ್ಡತುಮಕೂರು ಕೆರೆ, ಹೋರಾಟಕ್ಕೆ ಗ್ರಾಮಸ್ಥರು ಸಜ್ಜು

    ರಾಜೇಶ್ ಎಸ್.ಜಿ.ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ
    ಜೀವಜಲಕ್ಕೆ ಆಶ್ರಯವಾಗಿದ್ದ ದೊಡ್ಡತುಮಕೂರು ಕೆರೆಗೆ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವುದರಿಂದ ನೀರು ಕಪ್ಪಾಗುತ್ತಿದೆ. ಇದರಿಂದಾಗಿ ಕೆರೆ ವಿನಾಶದ ಅಂಚು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆ ಉಳಿಸಿಕೊಳ್ಳಲು ನಿರ್ಧರಿಸಿರುವ ದೊಡ್ಡತುಮಕೂರು ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
    ನಗರಸಭೆಯು ಕೆರೆಗೆ ಹೊಂದಿಕೊಂಡಂತೆ ಒಳಚರಂಡಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿದೆ. ಈ ಘಟಕದಲ್ಲಿ ಅವೈಜ್ಞಾನಿಕವಾಗಿ ನೀರು ಸಂಸ್ಕರಿಸಿ, ಕೆರೆಗೆ ಹರಿಸಲಾಗುತ್ತಿದೆ. ಆದರೆ, ತ್ಯಾಜ್ಯ ನೇರವಾಗಿ ಕೆರೆ ಒಡಲು ಸೇರುತ್ತಿದೆ. ಈ ಕೆರೆ ತುಂಬಿ ಕೋಡಿ ಬಿದ್ದು ದೊಡ್ಡತುಮಕೂರು ಕೆರೆಗೂ ಕೊಳಕು ನೀರು ಸೇರ್ಪಡೆಗೊಳ್ಳುತ್ತಿದೆ. ಇದರಿಂದ ಕೆರೆಯ ನೀರು ವಿಷಮಯವಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

    ಆಧುನಿಕ ಮಾದರಿಯಲ್ಲಿ ಶುದ್ಧೀಕರಿಸಿ: ಅವೈಜ್ಞಾನಿಕವಾಗಿ ಶುದ್ಧೀಕರಿಸುತ್ತಿರುವುದರಿಂದ, ನೀರು ಸ್ವಚ್ಛವಾಗುತ್ತಿಲ್ಲ. ವೈಜ್ಞಾನಿಕವಾಗಿ ನೀರು ಶುದ್ಧೀಕರಿಸಿ ಕೆರೆಗೆ ಹರಿಸಬೇಕು. ಇಲ್ಲವಾದಲ್ಲಿ ಈ ನೀರನ್ನು ಕೆರೆಯ ಬದಲು ಎಲ್ಲಿಗಾದರೂ ಹರಿಸಿಕೊಳ್ಳಿ ಎಂದು ಗ್ರಾಮಸ್ಥರು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

    ಕೆರೆಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳೇ ಉರುಳು: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕೈಗಾರಿಕೆಗಳು ಇವೆ. ಈ ಘಟಕಗಳು ಉತ್ಪಾದನೆಯಾಗುವ ರಾಸಾಯನಿಕ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ನೇರವಾಗಿ ಕೆರೆಗೆ ಹರಿಸುತ್ತಿವೆ. ಇದು ಕೆರೆಯ ಪಾಲಿಗೆ ಉರುಳಾಗಿದೆ ಎನ್ನಲಾಗಿದೆ.

    ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ: ದೊಡ್ಡ ಕೈಗಾರಿಕೆಗಳು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿಕೊಂಡಿಲ್ಲ. ವಿಷಯಕ್ತ ತ್ಯಾಜ್ಯವನ್ನು ಕಾಲುವೆಗಳಿಗೆ ಹರಿಬಿಡುತ್ತಿವೆ. ಇದರ ಪರಿಣಾಮ ಕೊಳವೆಬಾವಿಗಳಲ್ಲೂ ವಿಷಪೂರಿತ ನೀರು ಬರುತ್ತಿದೆ. ಈ ನೀರನ್ನು ಬಳಸುವುದರಿಂದ ಜನ, ಜಾನುವಾರುಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
    ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts