ನುಗ್ಗೇಹಳ್ಳಿ: ತೋಟಿ ಏತನೀರಾವರಿ ಯೋಜನೆ ಕಾಮಗಾರಿ ಶೇ. 90ರಷ್ಟು ಮುಗಿದಿದ್ದು, ಮುಂದಿನ 2023ರ ಮಾರ್ಚ್ ವೇಳೆಗೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಹೋಬಳಿಯ ಕಾವಲು ಹೊಸೂರು ಗ್ರಾಮದ ಹೊಸಕೆರೆ 25 ವರ್ಷಗಳ ನಂತರ ತುಂಬಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಗಂಗೆ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮಾತನಾಡಿದರು.
ತಾಲೂಕಿನಲ್ಲಿ ಹೆಚ್ಚು ಮಳೆಯಿಂದ ರೈತರು ನಾಟಿ ಮಾಡಿದ್ದ ಬೆಳೆಗಳು ಸಂಪೂರ್ಣ ಹಾಳಾಗಿ ಹೆಚ್ಚು ನಷ್ಟವಾಗಿದೆ. ನೂರಾರು ಮನೆಗಳು ಬಿದ್ದಿವೆ. ಅನೇಕ ಮನೆಗಳು ಶಿಥಿಲಗೊಂಡಿವೆ. ತಾಲೂಕಿಗೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕಾವಲು ಹೊಸೂರು ಗ್ರಾಮದಲ್ಲಿ ರಸ್ತೆ, ಒಳಚರಂಡಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಅನುದಾನ ನೀಡಲಾಗಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಓವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಗೋಪಿ, ಮುಖಂಡರಾದ ಬಿ.ಆರ್. ದೊರೆಸ್ವಾಮಿ, ತೋಟಿ ಜಯರಾಮ್, ಸಂಪತ್ಕುಮಾರ್, ನಂಜಪ್ಪ, ರಮೇಶ್, ದರ್ಶನ್, ಜಗದೀಶ್, ಮಹಲಿಂಗೇಗೌಡ, ಶೇಖರ್, ರಘು, ಕೃಷ್ಣಮೂರ್ತಿ, ನಾಗೇಗೌಡ ಇತರರು ಹಾಜರಿದ್ದರು.