ಹುಬ್ಬಳ್ಳಿ: ನಗರದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯ ಎ ತಂಡ ಕೆಎಸ್ಸಿಎ ಧಾರವಾಡ ವಲಯದ ನಾಲ್ಕನೇ ಡಿವಿಜನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬೆಳಗಾವಿಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಳಗಾವಿಯ ಅರ್ಜುನ ಸ್ಪೋರ್ಟ್ಸ್ ಕ್ಲಬ್ ಎ ತಂಡವನ್ನು ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯ ಎ ತಂಡ ಸೋಲಿಸಿತು. ಅರ್ಜುನ ಸ್ಪೋರ್ಟ್ಸ್ ಕ್ಲಬ್ 30 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ತಂಡ 12.4 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ಆರಂಭಿಕ ಆಟಗಾರ ಲೋಚನ್ಗೌಡ ಅಜೇಯ 94ರನ್ ಕಲೆಹಾಕಿ ಗೆಲುವಿನ ದಡ ಸೇರಿಸಿದರು. ಆಕಾಶ ಸಾಲಿಮಠ ಅಜೇಯ 25ರನ್ ಗಳಿಸಿದರು. ಈ ಎರಡೂ ತಂಡಗಳು ಕೆಎಸ್ಸಿಎ ಧಾರವಾಡ ವಲಯದ ಮೂರನೇ ಡಿವಿಜನ್ ಟೂರ್ನಿಗೆ ಅರ್ಹತೆ ಪಡೆದವು.
ಸೆಮಿಫೈನಲ್ನಲ್ಲಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯು ಸಿಸಿಐ ವಿರುದ್ಧ 117 ರನ್ಗಳಿಂದ ಮತ್ತು ಅರ್ಜುನ ಸ್ಪೋರ್ಟ್ಸ್ ಕ್ಲಬ್ ತಂಡವು ಹುಬ್ಬಳ್ಳಿಯ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್ ತಂಡದ ವಿರುದ್ಧ 24ರನ್ಗಳಿಂದ ಗೆಲುವು ಸಾಧಿಸಿ ಅಂತಿಮ ಹಂತ ತಲುಪಿದ್ದವು. ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ, ರಣಜಿ ಮಾಜಿ ಆಟಗಾರ ಸೋಮಶೇಖರ ಸಿರಗುಪ್ಪಿ ಪಂದ್ಯದಲ್ಲಿ ಆಡಿ 6 ಓವರ್ ಬೌಲಿಂಗ್ ಮಾಡಿ 2 ವಿಕೆಟ್ಗಳನ್ನು ಪಡೆದರು. ತಂಡದ ಪರವಾಗಿ ವಿನಯ್ ಎಲ್. 3 ವಿಕೆಟ್ ಕಬಳಿಸಿದರು.
ವಲಯ ನಿಯಂತ್ರಕ ಅವಿನಾಶ ಪೋತದಾರ, ದಯಾನಂದ ಶೆಟ್ಟಿ, ವಿಜಯಲಕ್ಷ್ಮೀ ಶಿರಗುಪ್ಪಿ, ವೇಮರಡ್ಡಿ ಪಾಟೀಲ, ಮಹೇಶ ಗೌಡ, ಕೃಷ್ಣಾ ರಾಯರಡ್ಡಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.