ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ತೆಂಗಿನ ಕೆರೆಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಸೋಮವಾರ ಆರು ಸಾವಿರ ಮೀನುಮರಿಗಳನ್ನು ಬಿಡಲಾಯಿತು.
ಮೀನುಗಾರಿಕೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ವಿವೇಕ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ತಾಲೂಕಿನ ಹಲವಾರು ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುತ್ತಿರುವ ಜತೆಗೆ ಈ ಬಾರಿ ಉತ್ತಮ ಮಳೆ ಬಿದ್ದಿದ್ದರಿಂದ ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ತುಂಬಿದೆ. ಇನ್ನು ಹಿಂಗಾರು ಮಳೆ ಬೀಳುವುದರಿಂದ ಮುಂದಿನ ಆರು ತಿಂಗಳವರೆಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ತಾಲೂಕಿನಲ್ಲಿ 42 ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳಿಗೆ ಹಂತಹಂತವಾಗಿ ಮರಿಗಳನ್ನು ಬಿಡಲಾಗುವುದು. ಇದರಿಂದ ತಾಲೂಕಿನಲ್ಲಿ ಮೀನು ಉತ್ಪಾದನೆ ಹೆಚ್ಚಳ, ಕೆರೆಗಳ ಹರಾಜಿನಿಂದ ಗ್ರಾಮ ಪಂಚಾಯಿತಿಗಳಿಗೆ ಆದಾಯ ಹೆಚ್ಚಳ, ಮೀನು ಕೃಷಿಯಲ್ಲಿ ತೊಡಗುವವರಿಗೆ ಉದ್ಯೋಗ ಹಾಗೂ ಆದಾಯ ದೊರಕಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯು ಆಯ್ದ ಗ್ರಾಮಪಂಚಾಯಿತಿ ಕೆರೆಗಳಿಗೆ ಅವುಗಳ ವಿಸ್ತೀರ್ಣದ ಆಧಾರದ ಮೇಲೆ ಉಚಿತವಾಗಿ ಮೀನು ಮರಿ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹದೇವಸ್ವಾಮಿ, ಗುತ್ತಿಗೆದಾರರು ಹಾಗೂ ಇತರರು ಇದ್ದರು.