ಬಿಡದಿ : ದೇಶದ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಕೊಡುಗೆ ಮಹತ್ತರವಾಗಿದೆ ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವದೂತ ಸ್ವಾಮೀಜಿ ಹೇಳಿದರು.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಟಿಕೆಎಂ ಕಾರ್ಮಿಕ ಸಂಘಟನೆಯ 99ನೇ ದಿನದ ಪ್ರತಿಭಟನೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಿಮಗೆ ಕೆಲಸ ಕೊಡುವ ಉತ್ಪಾದನಾ ಘಟಕಗಳು ದೇಶಕ್ಕೆ ಅವಶ್ಯಕವಾಗಿದ್ದು, ನಮ್ಮ ನೆಲದ ಮಕ್ಕಳಿಗೆ ಕೆಲಸ ಕೊಡುವ ಜತೆಗೆ ಸೇವಾ ಭದ್ರತೆ ಸಹ ಒದಗಿಸಬೇಕು.
ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರ ಹಕ್ಕುಗಳ ಬಗ್ಗೆ ಗೌರವವಿದೆ. ಅದೇರೀತಿ ಭಾರತೀಯ ನೆಲಕ್ಕೆ ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡುವ ಬದಲು, ಕಾನೂನಿಗಳಿಗೆ ತಿದ್ದುಪಡಿ ತರುವ ಅವಶ್ಯಕತೆಯ ಬಗ್ಗೆಯೂ ಚಿಂತನೆ ನಡೆಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದರು.
ಹೆಸರಾಂತ ಕಂಪನಿಗಳು ಸರ್ಕಾರದ ದಿಕ್ಕು ತಪ್ಪಿಸುವುದು ಅಥವಾ ನಿಯತ್ರಿಸುವ ಮಟ್ಟಕ್ಕೆ ಇಳಿಯಬಾರದು. ಕಾರ್ಮಿಕರಿದ್ದರೆ ಇಂತಹ ಸಾವಿರಾರು ಕಂಪನಿಗಳು ಉಳಿಯುತ್ತವೆ.
ಆದರೆ ಕಾರ್ಖಾನೆ ಮತ್ತು ಕಾರ್ಮಿಕರ ನಡುವಿನ ಬಾಂಧವ್ಯ ತಂದೆ – ಮಕ್ಕಳ ಸಂಬಂಧವಿದ್ದಂತೆ. ತಪ್ಪುಗಳು ಯಾರಿಂದಲಾದರೂ ಆದರೂ ಬೇಷರತ್ತು ಕ್ಷಮೆಯಾಚಿಸಿ ನಡೆದುಕೊಂಡು ಹೋಗುವ ಬಗ್ಗೆ ಇಬ್ಬರು ಚಿಂತನೆ ನಡೆಸಬೇಕು. ಆದರೆ ಆದಾಯ ಮೂಲದ ಉದ್ದೇಶ ಇಟ್ಟುಕೊಂಡು ಸಮಸ್ಯೆ ಸೃಷ್ಟಿಯಾಗಿರುವುದು ಪ್ರತಿಷ್ಟಿತ ಟೊಯೋಟಾ ಸಂಸ್ಥೆ ಹೋಗುತ್ತಿರುವ ದಾರಿ ಸರಿಯಲ್ಲ. ಮೂರುವರೆ ತಿಂಗಳಾದರೂ ಸಮಸ್ಯೆ ಬಗೆಹರಿಯದಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಸರ್ಕಾರ ನೀಡಿರುವ ಗಡುವನ್ನು ಮೀರಿದ್ದು ಕಾರ್ಮಿಕರಿಗೆ ತೊಂದರೆಯಾಗದಂತೆ ಕಂಪನಿ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಳ್ಳುವಂತೆ ಕಿವಿಮಾತು ಹೇಳಿದ ಅವರು ನೌಕರರು ಸಂಘಟನೆಯ ದಾರಿ ತಪ್ಪಿಸಿ ಪದಾಧಿಕಾರಿಗಳು ಸ್ವಾರ್ಥಕ್ಕೆ ಉಪಯೋಗಿಸುವ ಕೆಲಸ ಆಗಬಾರದು.
ಈ ವಿಷಯವಾಗಿ ಸರ್ಕಾರ ಮತ್ತು ಮಂತ್ರಿಗಳ ಜತೆ ಚರ್ಚೆ ನಡೆಸುತ್ತೇನೆ. ಹೀಗೆ ಪ್ರತಿಭಟನೆ ಮುಂದುವರಿಯುವ ವಾತಾವರಣ ಸೃಷ್ಟಿಯಾದರೆ ನಾವೆಲ್ಲರೂ ನಿಮೊಂದಿಗೆ ಇರುತ್ತೇವೆ ಎಂದು ಆತ್ಮಸ್ಥೈರ್ಯ ತುಂಬಿದರು.