More

    ತಾಲೂಕಾಸ್ಪತ್ರೆಗೆ 1.75 ಲಕ್ಷ ರೂ. ದೇಣಿಗೆ

    ಕುಮಟಾ: ಇಲ್ಲಿನ ತಾಲೂಕಾಸ್ಪತ್ರೆ ಎಕ್ಸರೇ ಘಟಕದ ಪೂರಕ ವ್ಯವಸ್ಥೆಗಾಗಿ 1.75 ಲಕ್ಷ ರೂ. ದೇಣಿಗೆಯನ್ನು ಉದ್ಯಮಿ ರಾಮನಾಥ (ಧೀರು) ಶಾನಭಾಗ ಅವರು ಬುಧವಾರ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ನೀಡಿದರು.

    ಬಳಿಕ ಮಾತನಾಡಿದ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಎಕ್ಸರೇ ಯಂತ್ರದ ಕೊರತೆ ಇತ್ತು. ಶಾಸಕರ ಸಹಕಾರದಿಂದ 300 ಎಂಎ ಹಾಗೂ 500 ಎಂಎನ ಎರಡು ಹೊಸ ಎಕ್ಸರೇ ಯಂತ್ರಗಳು ಬಂದಿವೆ. 500 ಎಂಎ ಯಂತ್ರದಿಂದ ಹೆಚ್ಚು ಸ್ಪಷ್ಟ ಚಿತ್ರಣಗಳು ದೊರೆಯಲಿದ್ದು, ಕೆಲವೊಂದು ಪ್ರಕರಣಗಳಲ್ಲಿ ವೈದ್ಯರು ನಿಖರವಾಗಿ ಸಮಸ್ಯೆ ಪತ್ತೆ ಹಚ್ಚಬಹುದಾಗಿದೆ. ಈ ಯಂತ್ರಗಳ ಕೊಠಡಿಯಿಂದ ವಿಕಿರಣಗಳು ಹೊರ ಸೂಸದಂತೆ ಸುರಕ್ಷೆ ವ್ಯವಸ್ಥೆ ಅಳವಡಿಸಬೇಕಾಗುತ್ತದೆ. ಈ ಕಾರ್ಯಕ್ಕಾಗಿ ತಗಲುವ ವೆಚ್ಚವನ್ನು ರಾಮನಾಥ ಶಾನಭಾಗರು ದೇಣಿಗೆಯಾಗಿ ನೀಡಿದ್ದು ಅತ್ಯುಪಯುಕ್ತವಾಗಿದೆ ಎಂದರು.

    ಹಾಗೆಯೇ ಇಲ್ಲಿನ ಡಯಾಲಿಸಿಸ್ ಘಟಕದಿಂದ ಹೊರ ಬರುವ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿದೆ. ಈ ಎಲ್ಲ ಹೊಸ ಸೌಲಭ್ಯಗಳನ್ನು ಸದ್ಯದಲ್ಲೇ ಶಾಸಕ ದಿನಕರ ಶೆಟ್ಟಿ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದರು.

    ದಾನಿ ರಾಮನಾಥ ಶಾನಭಾಗ ಮಾತನಾಡಿ, ನಮ್ಮ ತಂದೆ ಶ್ರೀಧರ ಹಾಗೂ ತಾಯಿ ಶಾಂತಾಬಾಯಿ ಶಾನಭಾಗ ಸ್ಮರಣಾರ್ಥ ತಾಲೂಕಾಸ್ಪತ್ರೆಯ ಅಗತ್ಯ ವ್ಯವಸ್ಥೆಗಾಗಿ 1.75 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಇದರಿಂದ ಇಲ್ಲಿ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂದರು. ಈ ವೇಳೆ ಶಾಸಕ ದಿನಕರ ಶೆಟ್ಟಿ, ಡಾ. ಶ್ರೀನಿವಾಸ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts