ಜೊಯಿಡಾ: ಮಂಗನಕಾಯಿಲೆ ಕಂಡುಬಂದಿರುವ ಬಾಪೇಲಿ ಮತ್ತು ಅಂಬರ್ಡಾ ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಜಂಟಿ ನಿರ್ದೆಶಕ ಡಾ. ಅಪ್ಪಾಸಾಸಾಹೇಬ ನರಹಟ್ಟಿ ಮತ್ತು ಕೀಟ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಂಗಗಳು ಸಾಯುತ್ತಿರುವ ಸ್ಥಳದಲ್ಲಿನ ಉಣ್ಣೆಗಳ ಮಾದರಿಯನ್ನೂ ಸಂಗ್ರಹಿಸಲಾಯಿತು. ಇದೇವೇಳೆ ತಾಲೂಕು ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ತಾಲೂಕಿನಲ್ಲಿ ನಾಲ್ವರಿಗೆ ಮಂಗನ ಕಾಯಿಲೆ: ತಾಲೂಕಿನಲ್ಲಿ ಈವರೆಗೆ ಒಟ್ಟು 4 ಜನರಿಗೆ ಮಂಗನಕಾಯಿಲೆ ಇರುವುದು ದೃಢ ಪಟ್ಟಿದ್ದು ರೋಗ ಲಕ್ಷಣ ಹೊಂದಿರುವ ಇನ್ನೂ ಐದು ಜನರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು,ಇವರ ರಕ್ತದ ಮಾದರಿಯನ್ನು ಕೆಎಫ್ಡಿ ಪರಿಕ್ಷೆಗಾಗಿ ಕಳುಹಿಸಲಾಗಿದೆ.
ತಾಲೂಕಿನಲ್ಲಿ ಕೆಎಫ್ಡಿ ಲಸಿಕೆ ನೀಡಿಕೆ ಕಾರ್ಯ ನಡೆಯುತ್ತಿದೆ. ಅಂಬರ್ಡಾ, ಬಾಪೇಲಿ, ಚಾಪಖಂಡ, ನಗರಿ, ಚಾಪೋಲಿ, ಕರಂಬಾಳ ಭಾಗಗಳಲ್ಲಿ 1050 ಕ್ಕೂ ಹೆಚ್ಚು ಜನರಿಗೆ ಇಲ್ಲಿಯ ತನಕ ಲಸಿಕೆ ನೀಡಲಾಗಿದೆ.