ವಿಜಯಪುರ : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2019-20 ನೇ ಆರ್ಥಿಕ ವರ್ಷದಲ್ಲಿ 10.69 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಲಾಭಾಂಶ ಕಳೆದ ಬಾರಿಗಿಂತಲೂ ಕಡಿಮೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ 1 ಕೋಟಿ ರೂ. ಮುಖ್ಯಮಂತ್ರಿಗಳ ನಿಧಿಗೆ ನೀಡಲಾಗಿದೆ. 50 ಲಕ್ಷ ರೂ. ಜನರಿಗೆ ವಿವಿಧ ರೀತಿಯ ನೆರವು ನೀಡಲಾಗಿದೆ. ಸರ್ಕಾರ ನೀಡುವ ಬಡ್ಡಿ ದರ 7.40 ರೂ.ಗಳಿಂದ 7.10 ಪೈಸೆಗೆ ಇಳಿಕೆ ಮಾಡಿ ರೈತರಿಗೆ ಸಾಲ ವಿತರಣೆ ಮಾಡಲಾಗಿದ್ದು, ಇದರಿಂದ ಈ ಬಾರಿ ಲಾಭದಲ್ಲಿ ಏರಿಕೆಯಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಪೂರ್ವದಲ್ಲಿ 17.82 ಕೋಟಿ ರೂ. ಲಾಭ ಗಳಿಸಿದ್ದು, ಅದರಲ್ಲಿ ಸರ್ಕಾರದ ನಿಯಮಾನುಸಾರ 7.13 ಕೋಟಿ ರೂ. ತೆರಿಗೆ ಪಾವತಿಸಿದ ನಂತರ 10.69 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ 2018-19 ನೇ ಆರ್ಥಿಕ ವರ್ಷದಲ್ಲಿದ್ದ 104.61 ಕೋಟಿ ರೂ. ಇದ್ದ ಷೇರು ಬಂಡವಾಳ ಪ್ರಸಕ್ತ ಆರ್ಥಿಕ ವರ್ಷಕ್ಕೆ 120.35 ಕ್ಕೆ ಏರಿಕೆಯಾಗಿದ್ದು, ಶೇ.15.74 ರಷ್ಟು ಹೆಚ್ಚಳಗೊಂಡಿದೆ. ಅದೇ ತೆರನಾಗಿ ಕಳೆದ ಆರ್ಥಿಕ ವರ್ಷದಲ್ಲಿ 208.52 ಕೋಟಿ ರೂ. ಇದ್ದ ನಿಧಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 221.80 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.13.28 ರಷ್ಟು ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 2899.06 ಕೋಟಿ ರೂ. ದುಡಿಯುವ ಬಂಡವಾಳ ಇದ್ದರೆ, ಪ್ರಸಕ್ತ ವರ್ಷ 3291.89 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷದಲ್ಲಿ 857.18 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ 1018.83 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 161.65 ಕೋಟಿ ರೂ. ಹೆಚ್ಚುವರಿ ಸಾಲ ವಿತರಣೆ ಮಾಡಲಾಗಿದೆ. ಅದೇ ರೀತಿ ಕಳೆದ ಬಾರಿ 736.50 ಕೋಟಿ ರೂ. ಕೃಷಿಯೇತರ ಸಾಲ ವಿತರಣೆ ಮಾಡಲಾಗಿತ್ತು. ಪ್ರಸಕ್ತ ವರ್ಷ 977.93 ಕೋಟಿ ರೂ. ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
* 10 ಹೊಸ ಶಾಖೆ ಆರಂಭ
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ ಇನ್ನೂ 10 ಹೊಸ ಶಾಖೆಯನ್ನು ಆರಂಭಿಸಲು ಅನುಮತಿ ದೊರಕಿದ್ದು, ಶೀಘ್ರವೇ ಈ ಶಾಖೆಗಳು ಆರಂಭಗೊಳ್ಳಲಿವೆ ಎಂದು ಶಿವಾನಂದ ಪಾಟೀಲ ಅವರು ತಿಳಿಸಿದರು. ಮಮದಾಪುರ, ನಾಗಠಾಣ, ಶಿವಣಗಿ, ಇಂಗಳೇಶ್ವರ, ಉಕ್ಕಲಿ, ಮುದ್ದೇಬಿಹಾಳ, ಹಿರೂರ, ಹುಲ್ಲೂರ, ಹಿರೇಬೇವನೂರ, ಅಥರ್ಗಾ ಗ್ರಾಮಗಳಲ್ಲಿ ಹೊಸ ಶಾಖೆಗಳು ಕಾರ್ಯಾರಂಭ ಆಗಲಿವೆ ಎಂದರು.
- ನ.14ರಿಂದ ಸಹಕಾರ ಸಪ್ತಾಹ
ನ.14ರಿಂದ 20ರ ವರೆಗೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭ ವಿಜಯಪುರದ ಕಿತ್ತೂರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನ.20 ರಂದು ಜರುಗಲಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನ.14 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭ ವಿಜಯಪುರದಲ್ಲಿ ನಡೆಯಲಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಂಬಂಸಿದಂತೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದರು.