ದಾವಣಗೆರೆ: ಕಚೇರಿಯೊಂದರ ಸಿಬ್ಬಂದಿ ಠೇವಣಿ ಮಾಡಿದ್ದಾಗಿ ಭಾವಿಸಿ, ಡಿಪಾಸಿಟ್ ಯಂತ್ರದಲ್ಲಿ ಬಿಟ್ಟು ಹೋಗಿದ್ದ 52,800 ರೂ.ಗಳನ್ನು ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಎಗರಿಸಿದ್ದಾನೆ.
ನಗರದ ರಕ್ಷಿತ್ ಎಂಟರ್ಪ್ರೈಸಸ್ನ ಸಿಬ್ಬಂದಿ ರಾಘವೇಂದ್ರ ಹಣ ಕಳೆದುಕೊಂಡವರು. ಕೇಬಲ್ದಾರರಿಂದ ಸಂಗ್ರಹಿಸಿದ್ದ 52,800 ರೂ.ಗಳನ್ನು ಡಿಪಾಸಿಟ್ ಮಾಡಲು ಜೂ. 29ರಂದು ರಾತ್ರಿ ಪಿ.ಬಿ.ರಸ್ತೆಯ ಐಸಿಐಸಿಐ ಬ್ಯಾಂಕ್ಗೆ ತಂದಿದ್ದರು.
ಡಿಪಾಸಿಟ್ ಯಂತ್ರದ ಸಂದೇಶಗಳಿಗೆ ಸ್ಪಂದಿಸಿದ್ದ ರಾಘವೇಂದ್ರ, ಹಣ ತುಂಬಿದ ಬಳಿಕ ಡಿಪಾಡಿಟ್ ಬಟನ್ ಒತ್ತುವುದನ್ನು ಮರೆತು ಹಾಗೆ ತೆರಳಿದ್ದರು. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ಮತ್ತೋರ್ವ ವ್ಯಕ್ತಿ, ಅಲ್ಲಿದ್ದ ಹಣವನ್ನು ಪ್ಯಾಂಟ್ ಜೇಬಿಗೆ ಹಾಕಿಕೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಣ ತುಂಬಿದ್ದರ ಬಗ್ಗೆ ಮೊಬೈಲ್ ಸಂದೇಶ ಬಾರದಿರುವ ಬಗ್ಗೆ ಅನುಮಾನಗೊಂಡ ರಾಘವೇಂದ್ರ, ಮರಳಿ ಅಲ್ಲಿಗೆ ಬಂದು ನೋಡಿದಾಗ ಹಣ ಕಾಣಲಿಲ್ಲ. ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿ 15 ದಿನ ಕಳೆದರೂ ಆರೋಪಿ ಪತ್ತೆಯಾಗಿಲ್ಲ ಎಂದು ರಾಘವೇಂದ್ರ ಪರಿತಪಿಸುತ್ತಿದ್ದಾನೆ.