ಶಿರಸಿ: ಕೋವಿಡ್-19 ಲಾಕ್ಡೌನ್ ಆದೇಶದಿಂದ ಆರೋಗ್ಯ ಸಮಸ್ಯೆಗೆ ಒಳಗಾದ ಜನರಿಗೆ ಸ್ಕೊಡ್ವೆಸ್ನ ಸಂಸ್ಥೆಯ ಟೀಮ್ ಸಂಜೀವಿನಿ ಬೈಕ್-ಸಂಚಾರ ಆರೋಗ್ಯ ಘಟಕಗಳು ನೀಡುತ್ತಿರುವ ಸೇವೆಗಳು ಜನರ ಪ್ರಶಂಸೆಗೆ ಒಳಗಾಗಿದೆ. ಲಾಕ್ಡೌನ್ ನಿಷೇಧಾಜ್ಞೆಯಿಂದ ಆಸ್ಪತ್ರೆಗಳಿಗೆ ಹೊಗಲಾಗದ ಕೂಲಿ ಕಾರ್ವಿುಕರು, ವೃದ್ಧರು, ಗರ್ಭಿಣಿ ಮಹಿಳೆಯರು, ಆರೋಗ್ಯ ಅನುಸರಣಾ ಸೇವೆಯ ಅವಶ್ಯಕತೆ ಇರುವ ರೋಗಿಗಳ ಸಮಸ್ಯೆಗಳಿಗೆ ನೇರವಾಗುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಿಸಲಾದ ಬೈಕ್-ಸಂಚಾರ ಆರೋಗ್ಯ ಘಟಕಗಳು ಇಂದು ಬಡವರ ಸಂಜೀವಿನಿ ಆಗಿ ಕಾರ್ಯನಿರ್ವಹಿಸುತ್ತಿದೆ. ದಿನನಿತ್ಯ ಸರಾಸರಿ 25 ರಿಂದ 40 ಕರೆಗಳನ್ನು ಸ್ವಿಕರಿಸಲಾಗುತ್ತಿದ್ದು, 20-25 ರೋಗಿಗಳಿಗೆ ಉಪಚಾರ ನೀಡಲಾಗುತ್ತಿದೆ.
ಗ್ರಾಮಾಂತರ ಪ್ರದೇಶಗಳಿಗೆ ಸೇವೆ ವಿಸ್ತರಣೆ: ಆಸ್ಪತ್ರೆಗಳಿಗೆ ಹೋಗಲಾಗದ ನಗರದ ಹಿಂದುಳಿದ ಪ್ರದೇಶಗಳ ಜನರಿಗಾಗಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಈ ಬೈಕ್-ಸಂಚಾರ ಆರೋಗ್ಯ ಘಟಕಗಳ ಸಹಾಯವಾಣಿ ಕೇಂದ್ರಕ್ಕೆ ಗ್ರಾಮೀಣ ಪ್ರದೇಶಗಳಿಂದ ಕರೆಗಳು ಬರುತ್ತಿದ್ದು, ಬೇಡಿಕೆ ಹೆಚ್ಚಿದ್ದರಿಂದ ಸಾಧ್ಯವಿರುವ ವ್ಯವಸ್ಥೆಯಲ್ಲಿ ಈ ಸೇವೆಯನ್ನು ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗಿದೆ ಎಂದು ಸ್ಕೊಡ್ವೆಸ್ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ತಿಳಿಸಿದ್ದಾರೆ.</