ಗೋಣಿಕೊಪ್ಪಲು: ಕ್ರೀಡೆಯ ತವರೂರು ಎನಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಸಕ್ತರ ಅನುಕೂಲಕ್ಕಾಗಿ ಟರ್ಫ್ ಮೈದಾನಗಳು ಇನ್ನಷ್ಟು ಹೆಚ್ಚಾಗಬೇಕು ಎಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ ಹೇಳಿದರು.
ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಹಾಕಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಕೊಡಗಿನಲ್ಲಿ ಕ್ರೀಡೆಗೆ ತನ್ನದೇ ಆದ ವಿಶೇಷತೆಯಿದೆ. ಪ್ರತಿ ಮನೆಯಲ್ಲಿಯೂ ಕ್ರೀಡಾಪಟುಗಳು ಇದ್ದಾರೆ. ಹೊಸ ಪ್ರತಿಭೆಗಳು ಹೊರಬರಲು ಮೈದಾನದ ಅವಶ್ಯಕತೆ ಹೆಚ್ಚಾಗಿದ್ದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟರ್ಫ್ ಮೈದಾನದಲ್ಲಿ ಅಭ್ಯಾಸ ನಡೆಸಬೇಕಾಗಿದೆ. ಹಾಕಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಜಿಲ್ಲೆಯ ವಿವಿಧ ಭಾಗದಲ್ಲಿ ಮತ್ತಷ್ಟು ಟರ್ಫ್ ಮೈದಾನಗಳು ತೆರೆಯುವಂತಾಗಬೇಕು. ಇದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ ಎಂದರು.
ಕಾಲೇಜು ಹಂತದಲ್ಲಿ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ಕ್ರೀಡಾಪಟುಗಳಿಗೆ ಮುಂದಿನ ಹಾದಿಯೂ ತೆರೆದಂತಾಗುತ್ತದೆ. ಆ ನಿಟ್ಟಿನಲ್ಲಿ ಕ್ರೀಡೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬಿ.ಎನ್.ಶಂಕರ್ನಾರಾಯಣ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್.ತಮ್ಮಯ್ಯ, ಯುನಿವರ್ಸಿಟಿ ಪರೀವೀಕ್ಷಕರಾದ ಕಂಬಿರಂಡ ರಾಕಿ ಪೂವಣ್ಣ, ಉಪನ್ಯಾಸಕ ಸಾಲ್ಡಾನ, ಶಿಕ್ಷಕಿ ಸಿ.ಪಿ.ನಿರ್ಮಿತ, ಬಿ.ಬಿ.ಪೂವಮ್ಮ ಇದ್ದರು. 13 ತಂಡಗಳು ಭಾಗವಹಿಸಿದ್ದವು.