ದಾವಣಗೆರೆ: ಬೆಳಗಾವಿ ಜಿಲ್ಲೆ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಶ್ರೀ ಮಹಾವೀರ ಸಂಘದ ನೇತೃತ್ವದಲ್ಲಿ ಜೈನ ಸಮಾಜದ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಘೋಷಣೆ ಕೂಗಿದ ಮುಖಂಡರು, ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ಜೈನ ಸಮಾಜದವರಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಡಿ ಡಿಸಿ ಶಿವಾನಂದ ಕಾಪಶಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಜೈನಮುನಿ ಬರ್ಬರ ಹತ್ಯೆ ಸಮಾಜಕ್ಕೆ ಆಘಾತ ತಂದಿದೆ. ಜೈನ ಮುನಿಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಜೈನಧರ್ಮದ ಇತರೆ ಮುನಿಗಳು ಅಪಾಯದ ಭೀತಿಯಿಂದ ಧರ್ಮಪಾಲನೆ ಮಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜೈನ ಧಾರ್ಮಿಕ ಮುಖಂಡರ ಹಿರಿಮೆ ಕುಂಠಿತಗೊಳಿಸುವ ಹುನ್ನಾರ ಕೆಲ ಶಕ್ತಿಗಳಿಂದ ನಡೆಯುತ್ತಿದೆ. ಅಲ್ಪಸಂಖ್ಯಾತರಾದ ಜೈನರಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಜೈನಮುನಿ ಅಮಾನುಷ ಹತ್ಯೆ ಕುರಿತು ಸರ್ಕಾರ ಶೀಘ್ರ ತನಿಖೆ ನಡೆಸಬೇಕು. ಹತ್ಯೆಯ ಹಿಂದಿನ ಷಡ್ಯಂತ್ರ ಬಯಲಿಗೆಳೆಯಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೈನಮುನಿಗಳು, ಜೈನ ಧರ್ಮೀಯರು ಹಾಗೂ ಜೈನ ದೇವಾಲಯಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಬಿ.ಎಸ್.ಅಜಿತ್ಕುಮಾರ್, ಕಾರ್ಯದರ್ಶಿ ಡಿ.ಸುನಿಲ್ಕುಮಾರ್, ಗೌರವಾಧ್ಯಕ್ಷ ಎಂ.ಎ.ಸುದರ್ಶನಕುಮಾರ್, ಗೌತಮ್ ಜೈನ್, ಜಿತೇಂದ್ರಕುಮಾರ್, ಅಶೋಕ್ಜೈನ್, ಚಂದ್ರಪ್ರಭು, ಪ್ರೀತಮ್ ದುಂಡಸಿ, ಧನ್ಯಕುಮಾರ್ ಇತರರು ಪ್ರತಿಭಟನೆಯಲ್ಲಿ ಇದ್ದರು.
—-