More

    ಜಿಲ್ಲೆಗೆ 48.97 ಕೋಟಿ ರೂ. ಬಿಡುಗಡೆ

    ಹಾನಗಲ್ಲ: ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಮುಳುಗಡೆ ಸೇರಿ ಬಿತ್ತನೆ ನಂತರ ಕಟಾವಿಗೆ ಮೊದಲು ಹಾನಿಯಾದಲ್ಲಿ ರೈತರಿಗೆ ವಿಮಾ ಕಂಪನಿ ತಕ್ಷಣಕ್ಕೆ ಶೇ. 25ರಷ್ಟು ಪರಿಹಾರ ವಿತರಿಸಬೇಕಿದೆ. ಅದರಂತೆ ಕಳೆದ ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಫಸಲ್ ಬಿಮಾ ಯೋಜನೆಯಡಿ 2019-20ರಲ್ಲಿ ವಿಮೆ ಮಾಡಿಸಿದ ಹಾವೇರಿ ಜಿಲ್ಲೆಯ 64,660 ರೈತರಿಗೆ 48.97 ಕೋಟಿ ರೂ. ಬಿಡುಗಡೆಯಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿಯೇ ಅಧಿಕಾರಿಗಳ ಗಮನ ಸೆಳೆದು, ಗೋವಿನಜೋಳ ಹಾಗೂ ಭತ್ತಕ್ಕೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ನೀಡುವ ಕುರಿತು ಸೂಚನೆ ನೀಡಿದ್ದರ ಫಲವಾಗಿ ಈ ಮೊತ್ತ ಬಿಡುಗಡೆಗೆ ಸಾಧ್ಯವಾಯಿತು ಎಂದರು.

    ಹಾನಗಲ್ಲ ತಾಲೂಕಿನ 20,852 ರೈತರು ವಿಮೆ ಕಂತು ಪಾವತಿಸಿದ್ದಾರೆ. ಅದರಲ್ಲಿ 16,609 ರೈತರಿಗೆ ವಿಮಾ ಕಂಪನಿ ಬೆಳೆ ನಷ್ಟದ ಶೇ. 25ರಂತೆ 15.11 ಕೋಟಿ ರೂ. ಬಿಡುಗಡೆಗೊಳಿಸಿದೆ. ಅದರಂತೆ ಬ್ಯಾಡಗಿ ತಾಲೂಕಿನ 6840 ರೈತರಿಗೆ 4.93 ಕೋಟಿ ರೂ., ಹಾವೇರಿ ತಾಲೂಕಿನ 9685 ರೈತರಿಗೆ 9.01 ಕೋಟಿ ರೂ., ಹಿರೇಕೆರೂರ ತಾಲೂಕಿನ 6370 ರೈತರಿಗೆ 3.03 ಕೋಟಿ ರೂ., ರಾಣೆಬೆನ್ನೂರ ತಾಲೂಕಿನ 15,430 ರೈತರಿಗೆ 1.09 ಕೋಟಿ ರೂ., ಸವಣೂರ ತಾಲೂಕಿನ 5475 ರೈತರಿಗೆ 3.65 ಕೋಟಿ ರೂ., ಶಿಗ್ಗಾಂವಿ ತಾಲೂಕಿನ 4251 ರೈತರಿಗೆ 2.28 ಕೋಟಿ ರೂ. ಸೇರಿ ಜಿಲ್ಲೆಗೆ 48.97 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೊಂದು ವಾರದೊಳಗಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ ಎಂದರು.

    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಗೌಳಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪುರ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಕೇಂದ್ರ ಸರ್ಕಾರ ರಾಜ್ಯದಲ್ಲಿ ಭತ್ತಕ್ಕೆ 1835 ರೂ.ಗಳ ಬೆಂಬಲ ಬೆಲೆ ನೀಡಿ ಖರೀದಿ ಪ್ರಕ್ರಿಯೆ ಕೈಗೊಂಡಿದೆ. ಆದರೆ, ಅದು ಸಾಲದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 200 ರೂ. ಹೆಚ್ಚುವರಿಯಾಗಿ ಘೊಷಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ರೈತ ಪರವಾದ ನಿಲುವು ಸ್ವಾಗತಾರ್ಹ. ರೈತರಿಗೆ ಭತ್ತ ಖರೀದಿಗೆ ಅನುಕೂಲವಾಗುವಂತೆ ತಾಲೂಕಿನ ಅಕ್ಕಿಆಲೂರಿನಲ್ಲಿ ಮಿಲ್ಲರ್ ಪಾಯಿಂಟ್ ಸ್ಥಾಪಿಸುವಂತೆ ಸೂಚಿಸಿದ್ದೇನೆ.
    | ಸಿ.ಎಂ. ಉದಾಸಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts