ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆಯ ಆಶ್ರಯದಲ್ಲಿ ರೋಟರ್ಯಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನ ಅಂಗವಾಗಿ ದಿ.ಶಾಂತಾರಾಮ ವಾಮಂಜೂರು ಸ್ಮಾರಕ 18ನೇ ವಾರ್ಷಿಕ ಅಂತರ್ಕ್ಲಬ್ ಜಿಲ್ಲಾಮಟ್ಟದ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನೇತೃತ್ವದಲ್ಲಿ ಭಾನುವಾರ ಮಂಗಳೂರಿನ ಕೆನರಾ ಕ್ಲಬ್ ಸಭಾಂಗಣದಲ್ಲಿ ಜರುಗಿತು.
ರೋಟರ್ಯಾಕ್ಟ್ ಕ್ಲಬ್ ಸಂತ ಅಲೋಶಿಯಸ್ ಕಾಲೇಜನ್ನು ಪ್ರತಿನಿಧಿಸಿದ ಚಮನ್ ಎಂ. ಮತ್ತು ಸಾತ್ವಿಕ್ ಯು.ಕೆ. ಜೋಡಿ ತಂಡವು ಪ್ರಥಮ ಸ್ಥಾನ ಗಳಿಸಿತು. ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸಂಸ್ಥೆಯನ್ನು ಪ್ರತಿನಿಧಿಸಿದ ಧನುಷಾ ಮತ್ತು ಶ್ರೇಯಸ್ ಜೋಡಿ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಮುಖ್ಯ ಅತಿಥಿ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಪ್ರದಾನ ಮಾಡಿದರು. ರೋಟರ್ಯಾಕ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಮೂಡುಬಿದಿರೆ ನಗರ ಮೂಲದ ಮಹಮ್ಮದ್ ಅಸ್ಲಾಂ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು. ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ಮಂಗಳೂರು ರೋಟರಿ ಸೆಂಟ್ರಲ್ ಸಂಸ್ಥೆಯ ಚುನಾಯಿತ ಅಧ್ಯಕ್ಷ ಬ್ರಯಾನ್ ಪಿಂಟೋ ಉಪಸ್ಥಿತರಿದ್ದರು.
ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ 6 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿದ್ದವು. ಈ ಸ್ಪರ್ಧಾಕೂಟವನ್ನು ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನಿರೂಪಿಸಿದರು.