ಹಾವೇರಿ: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದರೆ ದಿನಕ್ಕೆ ಕೋಟ್ಯಂತರ ರೂ. ಖರ್ಚಾಗಲಿದೆ. ನೆರೆ ಹಾವಳಿ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಬಾರದ ಪ್ರಧಾನಿ ಈಗ ಚುನಾವಣಾ ಪ್ರಚಾರಕ್ಕೆ ಜನರ ತೆರಿಗೆ ಹಣ ಪೋಲು ಮಾಡಿ ಮೇಲಿಂದ ಮೇಲೆ ಬರುತ್ತಿರುವುದು ಎಷ್ಟು ಸರಿ ಎಂದು ಕೆಪಿಸಿಸಿ ವಕ್ತಾರ ಚಂದ್ರಶೇಖರ ಮುದಕಣ್ಣವರ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಎಲ್ಲ ಖರ್ಚು ವೆಚ್ಚದ ಮೇಲೆ ನಿಗಾ ಇಟ್ಟಿರುವ ಚುನಾವಣಾ ಆಯೋಗ ಈ ಕುರಿತು ಚಿಂತಿಸಬೇಕು. ಈ ಖರ್ಚನ್ನು ಯಾರು ಭರಿಸುತ್ತಾರೆ ಎಂಬ ಕುರಿತು ಪರಿಶೀಲಿಸಬೇಕು. ಜನರಿಗೆ ಬಹಿರಂಗಪಡಿಸಬೇಕು. ಸರ್ಕಾರದ ಹಣವನ್ನು ಪೋಲು ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪಾಲಿಕೆ ಸದಸ್ಯ ಗಣೇಶ ಬಿಷ್ಟಣ್ಣವರ, ಸದಾನಂದ ಪಾಲನಕರ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಶಾಂತವ್ವ ಶಿರೂರ, ಶಿಲ್ಪಾ ಬಡಮ್ಮನವರ ಇದ್ದರು.