ಯಲ್ಲಾಪುರ: ಶಾಸಕರು ಮತ್ತು ಸಚಿವರಿಂದ ಅಧಿಕಾರಿಗಳು ಭೇಷ್ ಎನಿಸಿಕೊಳ್ಳುವುದು ಮುಖ್ಯ ವಲ್ಲ. ಜನಪರ ಕಾರ್ಯಗಳ ಮೂಲಕ ಜನರಿಂದ ಮೆಚ್ಚುಗೆ ಗಳಿಸುವುದು ನಿಜವಾದ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಕಂದಾಯ ಇಲಾಖೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ತಹಸೀಲ್ದಾರ್ ಡಿ.ಜಿ. ಹೆಗಡೆ ಅವರಿಗೆ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಿ ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಯಾಗಬಾರದು. ಜಾತಿಯ ವಾಸನೆಯಿಂದ ದೂರವಿರಬೇಕು. ಈ ಎರಡೂ ವಿಷಯಗಳನ್ನು ಪಾಲಿಸದೇ ಹೋದರೆ ಜನಸೇವೆ ಮಾಡುವ ಅರ್ಹತೆ ಅವನಿಗಿರುವುದಿಲ್ಲ. ಡಿ.ಜಿ. ಹೆಗಡೆ ಅವರು ಉತ್ತಮ ಕಾರ್ಯಗಳ ಮೂಲಕ ಜನಮೆಚ್ಚಿದ ಅಧಿಕಾರಿ ಎನಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಡಿ.ಜಿ. ಹೆಗಡೆ ಮಾತನಾಡಿ, 40 ವರ್ಷ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸಮಾಧಾನ ನನಗಿದೆ. ಯಲ್ಲಾಪುರದಲ್ಲಿ ಉತ್ತಮ ಜನಪ್ರತಿನಿಧಿಗಳು, ಸುಸಂಸ್ಕೃತ ಜನರು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ತಹಸೀಲ್ದಾರ್ ಹುದ್ದೆಯನ್ನು ನಿಭಾಯಿಸಲು ಕಷ್ಟವಾಗಲಿಲ್ಲ. ಯಲ್ಲಾಪುರದ ವಾತಾವರಣ ಪ್ರಭಾವ ಬೀರಿದ್ದು, ನಿವೃತ್ತಿಯ ನಂತರವೂ ಇಲ್ಲೇ ನೆಲೆಸುವುದಾಗಿ ತಿಳಿಸಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅಧ್ಯಕ್ಷತೆ ವಹಿಸಿದ್ದರು. ಮಾಲತಿ ಹೆಗಡೆ, ಸಿಪಿಐ ಸುರೇಶ ಯಳ್ಳೂರು, ನಾಯಕನಕೆರೆ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ಟ, ತಾಲೂಕು ಕಸಾಪ ಕಾರ್ಯದರ್ಶಿ ಎಸ್.ಎಲ್. ಜಾಲಿಸತ್ಗಿ, ಸುಬ್ರಹ್ಮಣ್ಯ ಭಟ್ಟ, ಖಜಾಂಚಿ ಜಿ. ಆರ್. ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ ಇತರರಿದ್ದರು. ಪತ್ರಕರ್ತ ಕೇಬಲ್ ನಾಗೇಶ, ಡಾ. ರವಿ ಭಟ್ಟ ಬರಗದ್ದೆ ನಿರ್ವಹಿಸಿದರು.