ಕೋಲಾರ: ನಗರದ ಶ್ರೀ ವೇಣುಗೋಪಾಲಸ್ವಾಮಿ ಪುಷ್ಕರಣ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ನಡುರಸ್ತೆಯಲ್ಲಿನ ಹಳ್ಳದಲ್ಲಿ ತುಂಬಿದ್ದ ನೀರಿನಲ್ಲಿ ರೈತ ಸಂಘದ ಮುಖಂಡರು ಬಾಗಿನ ಸಲ್ಲಿಸಿ ಜನಪ್ರತಿನಿಧಿಗಳ ಕಾರ್ಯವೈಖರಿ ಅಣಕಿಸಿದರು.
ಕೋಲಾರ ತಾಲೂಕಿನ ಎಸ್. ಅಗ್ರಹಾರ ಕೆರೆಗೆ ಬಾಗಿನ ಅರ್ಪಣೆ ವಿಚಾರದಲ್ಲಿ ತಮ್ಮನ್ನು ಆಹ್ವಾನಿಸದೆ ಸಂಸದ ಎಸ್. ಮುನಿಸ್ವಾಮಿ, ಶಾಸಕರಾದ ರಮೇಶ್ಕುಮಾರ್, ಶ್ರೀನಿವಾಸಗೌಡ ಇತರರು ಬಾಗಿನ ಅರ್ಪಿಸಿದ್ದು, ತಹಸೀಲ್ದಾರ್ ಶೋಭಿತಾ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿರುವುದರ ವಿರುದ್ದ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿಗೆ ದೂರು ನೀಡಿದ್ದಲ್ಲದೆ ತಹಸೀಲ್ದಾರ್ ವರ್ಗಾವಣೆ ಖಚಿತ ಎಂದು ಅಬ್ಬರಿಸಿದ್ದರು.
ಜಿಲ್ಲಾ ಕೇಂದ್ರ ಕೋಲಾರದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಲ್ಲಿ ಜನಪ್ರತಿನಿಧಿಗಳು ಇಚ್ಚಾಶಕ್ತಿ ತೊರದೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತೊಡಗಿದ್ದಾರೆಂದು ಟೀಕಿಸಿದ ರೈತ ಸಂಘದ ಮುಖಂಡರು ಸಚಿವ ಎಚ್ ನಾಗೇಶ್, ಸಂಸದ ಮುನಿಸ್ವಾಮಿ ಮತ್ತು ಶಾಸಕ ಶ್ರೀನಿವಾಸಗೌಡರ ಮುಖವಾಡ ಧರಿಸಿ ನಗರದ ವೇಣುಗೋಪಾಲಸ್ವಾಮಿ ಪುಷ್ಕರಣಿಯ ಬಳಿ ನಡು ರಸ್ತೆಯಲ್ಲಿನ ದೊಡ್ಡ ಹಳ್ಳದಲ್ಲಿ ತುಂಬಿದ್ದ ನೀರಿಗೆ ಶಾಸ್ತ್ರೋಕ್ತವಾಗಿ ಕಾಯಿ ಒಡೆದು ಅರಶಿನ ಕುಂಕುಮ, ಹೂವುಗಳೊಂದಿಗೆ ಗಂಗೆಗೆ ಪೂಜೆ ಸಲ್ಲಿಸಿ ಬಾಗಿನ ಸಲ್ಲಿಸಿ ಅಣಕಿಸಿದರಲ್ಲದಲೆ ಇನ್ನಾದರೂ ರಸ್ತೆ ದುರಸ್ತಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿ, ಮುಖಂಡರಾದ ಮುರಗಲ್ ಶ್ರೀನಿವಾಸ್, ಹನುಮಯ್ಯ ಇತರರು ಪಾಲ್ಗೊಂಡಿದ್ದರು.