More

    ಜನನ, ಮರಣ ಪ್ರಮಾಣ ಪತ್ರ ನೋಂದಣಿಗೆ ಕೋರ್ಟ್‌ಗೆ ಹೋಗಬೇಕಿಲ್ಲ

    ಮಂಡ್ಯ: ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯಲು ಒಂದು ವರ್ಷ ಮೇಲ್ಪಟ್ಟು ವಿಳಂಬವಾದಲ್ಲಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.


    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಜನನ, ಮರಣ ನೋಂದಣಿ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಒಂದು ವರ್ಷ ಮೇಲ್ಪಟ್ಟು ಜನನ, ಮರಣ ಪತ್ರ ವಿಳಂಬವಾದಲ್ಲಿ ಆನ್‌ಲೈನ್ ಮೂಲಕ ಉಪವಿಭಾಗಾಧಿಕಾರಿಗೆ ಅಗತ್ಯ ದಾಖಲಾತಿಗಳೊಂದಿಗೆ 500 ರೂ.ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.


    21 ದಿನ ಮೇಲ್ಪಟ್ಟು ಒಂದು ವಷರ್ದೊಳಗಿನ ಜನನ ಮರಣ ವಿಳಂಬ ನೋಂದಣಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ತಹಸೀಲ್ದಾರ್, ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಆಯುಕ್ತರು/ ಮುಖ್ಯಾಧಿಕಾರಿ ಆದೇಶ ನೀಡುವ ಅಧಿಕಾರ ಹೊಂದಿರುತ್ತಾರೆ. ಜನನ ಮತ್ತು ಮರಣ ಪ್ರಮಾಣ ಪತ್ರ ಹಲವಾರು ಸಂದರ್ಭದಲ್ಲಿ ಅತ್ಯವಶ್ಯಕವಾಗಿದ್ದು, ಸಾರ್ವಜನಿಕರು 21 ದಿನದೊಳಗೆ ಅಥವಾ ವಿಳಂಬವಾದಲ್ಲಿ ತಹಸೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದು ಹೇಳಿದರು.


    ಈ ಪ್ರಮಾಣ ಪತ್ರವನ್ನು ಮೊದಲು 21 ದಿನದೊಳಗೆ ಉಚಿತವಾಗಿ, ವಿಳಂಬವಾದ 21 ದಿನದಿಂದ 30 ದಿನದವರೆಗೆ 100 ರೂ., 30 ದಿನ ಮೇಲ್ಪಟ್ಟು ಒಂದು ವರ್ಷದೊಳಗೆ 200 ರೂ. ಶುಲ್ಕ ಪಾವತಿಸಿ ಪಡೆಯಬಹುದು. ವಿಳಂಬ ನೋಂದಣಿಗಳನ್ನು ಕಡ್ಡಾಯವಾಗಿ ಕಚೇರಿ ಮುಖ್ಯಸ್ಥರು ಮಾಡಬೇಕು ಎಂದು ತಿಳಿಸಿದರು.


    ಇನ್ನು ಬೆಳೆ ಕಟಾವು ಪ್ರಯೋಗಗಳನ್ನು ವಿಮೆ ಹೊಂದಿರುವ ಬೆಳೆ ಹಾಗೂ ವಿಮೆ ಹೊಂದಿಲ್ಲದ ಬೆಳೆಗಳಿಗೆ ಇಲಾಖೆವಾರು ಗುರಿ ನಿಗದಿ ಮಾಡಲಾಗಿದ್ದು, ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕು. ಮೂಲ ಕಾರ್ಯಕರ್ತರು ನಿಖರ ಮಾಹಿತಿ ಹಾಗೂ ರೈತರು ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತಿಳಿಸಿರುವ ನಿಯಮಗಳನ್ನು ಅನುಸರಿಸಿ ಅಪ್‌ಲೋಡ್ ಮಾಡಬೇಕು. 11ನೇ ಕೃಷಿ ಗಣತಿ 2023 ಜನವರಿ ಯಲ್ಲಿ ಪ್ರಾರಂಭವಾಗಿದ್ದು, ಒಟ್ಟು 1,468 ಗ್ರಾಮಗಳಲ್ಲಿ 18,47,840 ಸರ್ವೇ ನಂಬರ್‌ಗಳಲ್ಲಿ ಮೊದಲನೇ ಹಂತದ ಕೃಷಿ ಗಣತಿ ಕಾರ್ಯ ಪೂರ್ಣಗೊಳಿಸಲಾಗಿರುತ್ತದೆ ಎಂದು ಹೇಳಿದರು.


    ಸಭೆೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts