More

    ಚುನಾವಣಾ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿ

    ಬೆಳಗಾವಿ: ಶಾಂತಿಯುತ ಮತದಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಚುನಾವಣಾ ಮಾರ್ಗಸೂಚಿಯಂತೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿಧಾನಸಭೆ ಚುನಾವಣೆ ಕರ್ತವ್ಯ ನಿಯೋಜಿತ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಚುನಾವಣೆ ನಿರ್ವಹಣೆ ದೊಡ್ಡ ಜವಾಬ್ದಾರಿ ಕೆಲಸವಾಗಿದೆ. ಈಗಾಗಲೇ ಹೊಸ ಎಂ.3 ಮಷಿನ್‌ಗಳು ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಮಷಿನ್‌ಗಳ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಗೆ ಮಾಹಿತಿ ಇರಬೇಕು. ಚುನಾವಣಾ ಕರ್ತವ್ಯಕ್ಕೆ ಹೊಸವಾಗಿ ನಿಯೋಜನೆ ಆಗಿರುವವರು ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಮತದಾರಿಗೆ ಮತಗಟ್ಟೆ ಸಂಖ್ಯೆ ಕುರಿತು ಮಾಹಿತಿ ನೀಡಬೇಕು. ನಗರ ಪ್ರದೇಶಗಳಲ್ಲಿ ಹೆಚ್ಚು ಶಾಲೆಗಳು ಇರುವುದರಿಂದ ಮತದಾರರು ಗೊಂದಲಕ್ಕೆ ಒಳಗಾಗಿ ಮತ ಚಲಾವಣೆ ಮಾಡದೆ ಇರಬಹುದು ಹಾಗಾಗಿ ಬಿಎಲ್ಒಗಳಿಂದ ಮಾಹಿತಿ ಪಡೆದು ಮತಗಟ್ಟೆ ಸಂಖ್ಯೆ, ಮಾಹಿತಿ, ಚೀಟಿಯಲ್ಲಿ ಬರೆದುಕೊಟ್ಟು ಮತದಾರರ ಗೊಂದಲ ದೂರ ಮಾಡಬೇಕು ಎಂದು ತಿಳಿಸಿದರು
    ಮತದಾರರಿಗೆ ಜಾಗೃತಿ ಮೂಡಿಸಿ: ನಗರ ಪ್ರದೇಶದಲ್ಲಿ 1500 ಮತಗಳು ಇರುವ ಮತಗಟ್ಟೆ ಹಾಗೂ ಗ್ರಾಮೀಣ ಪ್ರದೇಶದ ಮತಗಟ್ಟೆಯಲ್ಲಿ 1,200ಕ್ಕಿಂತ ಹೆಚ್ಚು ಮತಗಳು ಇದ್ದಲ್ಲಿ ಹೆಚ್ಚುವರಿಯಾಗಿ ಹೊಸ ಮತಗಟ್ಟೆ ಸ್ಥಾಪಿಸಲು ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಸೂಕ್ಷ್ಮ ಪ್ರದೇಶಗಳ ಹಾಗೂ ಯಾವುದೇ ಪಕ್ಷದ ಅಭ್ಯರ್ಥಿಗಳಿಂದ ಆಮಿಷ ಹಾಗೂ ದಬ್ಬಾಳಿಕೆಗೆ ಒಳಪಟ್ಟ ಪ್ರದೇಶಗಳಿಗೆ ಭೇಟಿ ನೀಡಿ, ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರಣಕ್ಕೆ ಅಂತಹ ಸ್ಥಳಗಳಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ಭಯ ಮುಕ್ತ ಚುನಾವಣೆ ನಡೆಸುವುದಕ್ಕೆ ಭಯಪೀಡಿತ ಪ್ರದೇಶ ಹಾಗೂ ವ್ಯಕ್ತಿಗಳನ್ನು ಗುರುತಿಸಿ ಭೀತಿ ನಕಾಶೆ ತಯಾರಿಸಿ, ಸೂಕ್ತ ಕ್ರಮಕ್ಕಾಗಿ ಶಿಫಾರಸು ಮಾಡಬೇಕು. ಮುಕ್ತ ನ್ಯಾಯಸಮ್ಮತ ಪಾರದರ್ಶಕ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಬೇಕು. ಭಯ ಭೀತ ಪ್ರದೇಶಗಳಿಗೆ ನಿರಂತರ ಭೇಟಿ ನೀಡಿ, ಜನರಲ್ಲಿ ಭಯ ಹೋಗಲಾಡಿಸಿ, ಮತ ಚಲಾಯಿಸಲು ಜಾಗೃತಿ ಮೂಡಿಸಬೇಕು ಎಂದು ಬಿಮ್ಸ್ ಆಡಳಿತಾಧಿಕಾರಿ ಪ್ರೀತಂ ನಸಲಾಪುರೆ ಅವರು ತರಬೇತಿ ನೀಡಿದರು.

    ಮಾದರಿ ಸದಾಚಾರ ನೀತಿ ಸಹಿಂತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಮತದಾನ ನಡೆಯುವಾಗ ಯಾವುದಾದರೂ ಒಂದು ಮತಗಟ್ಟೆಯಲ್ಲಿ ತೊಂದರೆ ಆದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಯತ್ನಿಸಬೇಕು. ಒಂದು ವೇಳೆ ನಿಯಂತ್ರಣವಾಗದೆ ಇದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ಸಲಹೆ-ಸೂಚನೆ ಪಡೆಯಬೇಕು. ಮತದಾನಕ್ಕೆ 7 ದಿನಗಳ ಮುಂಚಿತವಾಗಿ ಸೆಕ್ಟರ್ ಅಧಿಕಾರಿಗಳಿಗೆ ವಲಯ ನ್ಯಾಯಾಧಿಕಾರ (ಮ್ಯಾಜಿಸ್ಟ್ರಿಯಲ್) ಅಧಿಕಾರ ನೀಡಲಾಗುವುದು. ಸಿಆರ್‌ಪಿಸಿ ಸೆಕ್ಷನ್ ಪ್ರಕಾರ 144ರ ಪ್ರಕಾರ ತುರ್ತು ಸನ್ನಿವೇಶ ಉಂಟಾದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ತಕ್ಷಣ ಆದೇಶವನ್ನು ಸೆಕ್ಟರ್ ಅಧಿಕಾರಿಗಳು ಹೊರಡಿಸಬಹುದು ಎಂದು ನಸಲಾಪುರೆ ತಿಳಿಸಿದರು.

    ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಬೆಳಗಾವಿ ಉಪ ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ, ಬಿಮ್ಸ್ ಸಿಇಒ ಸಯ್ಯದಾ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ಚುನಾವಣೆ ಕರ್ತವ್ಯ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts