ಕಾರವಾರ: ಕುಮಟಾ ಆಘನಾಶನಿ ನದಿಯಲ್ಲಿ ಚಿಪ್ಪಿಕಲ್ಲು ಗಣಿಗಾರಿಕೆಗೆ ನೀಡಿದ್ದ ಪರವಾನಗಿ ಜ.7 ರಂದು ಮುಕ್ತಾಯವಾಗುತ್ತಿದ್ದು, ಅದನ್ನು ನವೀಕರಣ ಮಾಡಬಾರದು ಎಂದು ಕುಮಟಾ ಮೀನುಗಾರರ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಮಾಡಿದೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರು, ಅಘನಾಶಿನಿ ನದಿ ಅಳಿವೆ ಪ್ರದೇಶವು ಉಪು್ಪ ನೀರಿನಿಂದ ಸಂಪದ್ಬರಿತವಾಗಿದೆ. ಸಮುದ್ರ ದಡದಿಂದ ಕತಗಾಲ ಉಪ್ಪಿನಪಟ್ಟಣವರೆಗೆ 22 ಕಿಮೀ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ಸಾಂಪ್ರದಾಯಿಕವಾಗಿ ಚಿಪ್ಪಿ ಕಲ್ಲು, ಕಲಗಾ, ಖಂಡ್ಗಾ, ಮುಂತಾದ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿವೆ. ಅದೇ 524.08 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯಿಕ ಚಿಪ್ಪಿಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ನಿರಂತರವಾಗಿ ಚಿಪ್ಪಿಕಲ್ಲು ತೆಗೆಯುವುದರಿಂದ ಅಪೂರ್ವ ಮತ್ಸ್ಯ ಸಂತತಿ ನಾಶವಾಗುತ್ತಿದೆ. ಕಾಂಡ್ಲಾ ಗಿಡ ನಾಶವಾಗುತ್ತಿದೆ. ಸ್ಥಳೀಯ ಮೀನುಗಾರರ ಜೀವನದ ಮೂಲಕ್ಕೆ ಕಲ್ಲು ಬಿದ್ದಿದೆ. ಪೌಷ್ಟಿಕ ಆಹಾರ ಸಿಗದಂತಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಅಘನಾಶಿನಿ ಹಿನ್ನೀರಿನ 4.856 ಹೆಕ್ಟೇರ್ ಪ್ರದೇಶದಲ್ಲಿ ಚಿಪ್ಪಿಕಲ್ಲು ಗಣಿಗಾರಿಕೆಗೆ ನೀಡಿದ ಪರವಾನಗಿಯನ್ನು ಕಾಯಮಾಗಿ ರದ್ದು ಮಾಡಬೇಕು. ನಿರಂತರ ಗಣಿಗಾರಿಕೆಯಿಂದ ಉಂಟಾದ ಹಾನಿಗೆ ಪರಿಹಾರವನ್ನು ಸರ್ಕಾರ ಭರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.