ಚಿತ್ರದುರ್ಗ ನಗರಸಭೆ ಮೇಲೆ ಪ್ರಥಮ ಬಾರಿಗೆ ಕಮಲದ ಭಾವುಟ
ಉಪಾಧ್ಯಕ್ಷ ಸ್ಥಾನಕ್ಕೆ ಆಭ್ಯರ್ಥಿಯ ಆಯ್ಕೆ ಹೇಗಾಯಿತು?
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರಸಭೆ ನೂತನ ಅಧ್ಯಕ್ಷರಾಗಿ ತಿಪ್ಪಮ್ಮ ವೆಂಕಟೇಶ್ ಹಾಗೂ ಉಪಾಧ್ಯಕ್ಷೆಯಾಗಿ ಶ್ವೇತಾ ವಿರೇಶ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಒಂದೆಡೆ ನಗರಸಭೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಯನ್ನೇರುವಂತಾಯಿತು. ಮತ್ತೊಂದೆಡೆ ಒನಕೆ ಒಬವ್ವ ನಾಡಿನಲ್ಲಿ ಆಯಕಟ್ಟಿನ ಅಧಿಕಾರದ ಜಾಗಗಳಲ್ಲಿರುವ ಮಹಿಳಾ ಪ್ರಾಬಲ್ಯವೂ ಹೆಚ್ಚಾಯಿತು.
ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಿತ್ತು. ಜಿಪಂ ಮಿನಿ ಸಭಾಂಗಣದಲ್ಲಿ ಭಾನುವಾರ ನಡೆದ ಆಯ್ಕೆ ಪ್ರಕ್ರಿಯೆ ವೇಳೆ ಬಿಜೆಪಿಗೆ ಸಾಥ್ ನೀಡಿದ್ದ ಕಾಂಗ್ರೆಸ್,ಜೆಡಿಎಸ್ ಹಾಗೂ ಪಕ್ಷೇತರ ಕೆಲವು ಸದಸ್ಯರು ಹಾಜರಿದ್ದರು. ಬೆಳಗ್ಗೆ 10 ಗಂಟೆ ಗೆ ತಿಪ್ಪಮ್ಮ,ಶ್ವೇತಾ ನಾಮಪತ್ರ ಸಲ್ಲಿಸಿದ್ದು,ಪ್ರತಿಸ್ಪರ್ಧಿಗಳಾಗಿ ಯಾರೂ ನಾಮಪತ್ರ ಸಲ್ಲಿಸಿದ್ದರಿಂದಾಗಿ ಚುನಾವಣಾಧಿಕಾರಿ,ಎಸಿ ವಿ.ಪ್ರಸನ್ನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರಸಭೆ ಸದಸ್ಯರು,ನೂತನ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಬೆಂಬಲಿಗರ ಘೋಷಣೆಗಳ ನಡುವೆ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಒಂದು ಕಾಲದಲ್ಲಿ ಒಂದೇ ಒಂದು ಸೀಟನ್ನು ಗೆಲ್ಲಲಾಗದ್ದಂಥ ಪರಿಸ್ಥಿತಿಯಲ್ಲಿ ಪಕ್ಷವಿಂದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಚುನಾ ವಣೆ ನಡೆಯುವವರೆಗೂ ರಾಜಕಾರಣ ಬೇಕು, ಆದರೆ ನಂತರದಲ್ಲಿ ಅಭಿವೃದ್ಧಿಗೆ ಆದ್ಯತೆ ಕೊಡಬೇಕು.ಯಾವುದೇ ಪಕ್ಷಪಾತ ಮಾಡದೇ,ನಾನು, ಎಲ್ಲ 35 ಸದಸ್ಯರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು. ಈಗ ನಿಗದಿಯಾಗಿರುವ ಮೀಸಲು ಎರಡೂವರೆ ವರ್ಷದವರೆಗೆ ಇರುತ್ತದೆ. ಈ ನಡುವೆ ಅಧಿಕಾರದ ಹಂಚಿಕೆ ಮಾತುಕತೆ ಆಗಿಲ್ಲ. ಹಾಗೇನಾದರೂ ಇದ್ದಲ್ಲಿ ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರುವುದಾಗಿ ಶಾಸಕರು ತಿಳಿಸಿದರು.
ಲಾಟರಿ ಮೂಲಕ ಉಪಾಧ್ಯಕ್ಷರ ಆಯ್ಕೆ
ಬಿಸಿಎ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದ್ದರಿಂದ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು,ಶಾಸಕ ತಿಪ್ಪಾರೆಡ್ಡಿ ಅವರ ಹತ್ತಿ ಮಿಲ್ನಲ್ಲಿ ನಡೆದ ಮಾತುಕತೆ ವೇಳೆ ಅಂತಿಮವಾಗಿ ಅನುರಾಧ,ಶ್ವೇತಾ ಹಾಗೂ ಶ್ರೀದೇವಿ ಅವರ ಪೈಕಿ ಒಬ್ಬರ ಹೆಸರನ್ನು ಲಾಟರಿ ಮೂಲಕ ಆಯ್ಕೆ ಮಾಡ ಬೇಕೆಂಬ ಸಲಹೆ ಕೇಳಿ ಬಂತು. ಇದಕ್ಕೆ ಸಹಮತ ವ್ಯಕ್ತವಾಗಿದ್ದರಿಂದಾಗಿ ನಡೆದ ಮೂವರ ಅದೃಷ್ಟ ಪರೀಕ್ಷೆಯಲ್ಲಿ ಉಪಾಧ್ಯಕ್ಷ ಗದ್ದುಗೆ,ಶ್ವೇತಾ ಅವರಿಗೆ ಒಲಿಯಿತು. ನಾಮಪತ್ರ ಸಲ್ಲಿಸಿದ ಬಳಿಕ ಎಲ್ಲ ಸದಸ್ಯರು,ಬೆಂಬಲಿಗರು ತಿಪ್ಪಾರೆಡ್ಡಿ ನಿವಾಸದಿಂದ ಮಧ್ಯಾಹ್ನ 1ಗಂಟೆಗೆ ಜಿಪಂಕ್ಕೆ ಬಂದರು.