ಬೈಲಹೊಂಗಲ,ಬೆಳಗಾವಿ : ಪಟ್ಟಣದ ಕೆಎಸ್ಆರ್ಟಿಸಿ ಚಾಲಕ, ನಿರ್ವಾಹಕರು ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಾಲೇಜ್ಗೆ ತೆರಳಲು ಸಾಣಿಕೊಪ್ಪ ಗ್ರಾಮದಲ್ಲಿ ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಬೆಳಗಾವಿಯಿಂದ ಬೈಲಹೊಂಗಲಕ್ಕೆ ತೆರಳುತ್ತಿದ್ದ ಬಸ್ ಕಂಡು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಚಾಲಕ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಪಾಲಕರ ಸಹಾಯದಿಂದ ಬೈಕ್ ಮೂಲಕ ತೆರಳಿ ಬಸ್ ತಡೆದು ಬೈಲಹೊಂಗಲಕ್ಕೆ ಪ್ರಯಾಣಿಸಿದ್ದಾರೆ.
ಬೈಲಹೊಂಗಲ ಡಿಪೋಗೆ ತೆರಳಿದ ಬಳಿಕ ಚಾಲಕ ಹಾಗೂ ನಿರ್ವಾಹಕರು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಎಬಿವಿಪಿ ಪದಾಧಿಕಾರಿಗಳು ಘಟನೆ ಬಗ್ಗೆ ತಿಳಿದು ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಯಿಂದ ಕರೆತಂದು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು. ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಒಂದು ಗಂಟೆಗೂ ಹೆಚ್ಚು ಕಾಲ ಬಸ್ ಸಂಚಾರ ತಡೆದು ಪ್ರತಿಭಟಿಸಿದರು.
ಸಿಪಿಐ ಉಳವಪ್ಪ ಸಾತೆನಹಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಡಿಪೋ ಮ್ಯಾನೇಜರ್ಗೆ ತಿಳಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಅಪ್ಪಣ್ಣ ಹಡಪದ ಮಾತನಾಡಿ, ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ತೀವ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ನಾಗರಾಜ ಸಾಣಿಕೊಪ್ಪ, ಸುನೀಲ ಕಿತ್ತೂರ, ಕಿರಣ ದೊರೆಗೌಡ್ರ, ದಯಾನಂದ ಗುಳ್ಳೆಗಡ್ಡಿ, ಅರುಣ ಡೊಳ್ಳಿನ ಇತರರು ಇದ್ದರು.