ಚಿಕ್ಕೋಡಿ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮಳ ಇತಿಹಾಸ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದ ಆರ್.ಡಿ.ಕಾಲೇಜು ಮೈದಾನದಲ್ಲಿ ಜೊಲ್ಲೆ ಗ್ರೂಪ್ ಯಕ್ಸಂಬಾ ಮತ್ತು ಧಾರವಾಡದ ರಂಗಾಯಣ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಿತ್ತೂರ ಚನ್ನಮ್ಮ ನಾಟಕ ಉದ್ಘಾಟಿಸಿ ಮಾತನಾಡಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹಲವು ರಾಜರು ಬಲಿದಾನಗೈದಿದ್ದಾರೆ. ಅಂತಹ ಪ್ರಮುಖರ ಸಾಲಿನಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಪ್ರಥಮವಾಗಿ ಹೋರಾಟ ಮಾಡಿದರು ಎಂದರು.
ಹಲವು ಹೋರಾಟಗಾರರ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ಈ ಸಂಗತಿ ಅರಿಯಬೇಕಾದವರು ಟಿವಿ, ಮೊಬೈಲ್ ಪ್ರಭಾವಳಿಗೆ ಸಿಲುಕಿದ್ದಾರೆ. ನಾಟಕ ನೋಡುವ ಮೂಲಕ ಯುವಕರು ಚನ್ನಮ್ಮಳ ಶೌರ್ಯ ಮತ್ತು ಧೈರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಧಾರವಾಡದ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಮಹಾಮಂಡಳ ನಿರ್ದೇಶಕ ಜಗದೀಶ ಕವಟಗಿಮಠ ಮಾತನಾಡಿದರು. ವಿಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಪಾದನ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಕಮತೆನಟ್ಟಿ ಶಿವಬಸವ ಸ್ವಾಮೀಜಿ, ಖಡಕಲಾಟ ಶಿವಬಸವ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಜ್ಯೋತಿಪ್ರಸಾದ ಜೊಲ್ಲೆ, ರಾವಸಾಹೇಬ ಕಮತೆ, ಜಯಾನಂದ ಜಾಧವ, ನಾಗರಾಜ ಮೇದಾರ, ಬಾಬು ಮಿರ್ಜೆ ಇದ್ದರು. ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.