ಯಡ್ರಾಮಿ: ತಾಲೂಕು ಕೇಂದ್ರವಾಗಿದ್ದು, ತಾಲೂಕು ಪಂಚಾಯಿತಿ ಕಚೇರಿಯೂ ಆರಂಭವಾಗಿದೆ. ಇಷ್ಟಾದರೂ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪಟ್ಟಿ ಘೋಷಣೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ್ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಯಡ್ರಾಮಿ ಗ್ರಾಮ ಪಂಚಾಯಿತಿ ಚುಣಾವಣೆಗೆ ವಿವಿಧ ವರ್ಗಗಳಿಗೆ ಮೀಸಲಾತಿ ಸ್ಥಾನಗಳ ಪಟ್ಟಿ ಘೋಷಣೆ ಮಾಡಿದ್ದಾರೆ. ಯಡ್ರಾಮಿ ಪಟ್ಟಣ ಪಂಚಾಯಿತಿ ಮಾಡಲು ಏನಾದರೂ ತೊಂದರೆ ಇದೆಯೇ ? ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿಬೇಕಲ್ಲವೇ. ಅದು ಬಿಟ್ಟು ತಾಲೂಕು ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಇರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಮೂಲ ಸೌಕರ್ಯಗಳಿಲ್ಲದೆ ಜನತೆ ಪರದಾಡುತ್ತಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯಿತಿಯಾದರೆ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬುದು ಜನರ ಆಶಯವಾಗಿದೆ. ಶಾಸಕರು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಯಡ್ರಾಮಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಸಕ ಡಾ. ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕರ್ತರಾದ ದೇವಾನಂದ ಗುತ್ತೇದಾರ್, ಅಪ್ರೋಜ್ ಅತನೂರ, ಬಾಲು ಮಡಿವಾಳ್ಕರ, ಅನೀಲ ಗುತ್ತೇದಾರ್, ಸಿದ್ದು ಭೂತಾಳಿ, ಮನು ವಿಶ್ವಕರ್ಮ, ಶಿವು ಡಂಬಳ, ವಿನಯ ಸಜ್ಜನ್, ಶಾರುಕ್ ಖಾನಾಪುರ, ಮಡು ದೊರೆ, ಬಸವರಾಜ ಕಲಕೇರಿ, ದೀಲಿಪ ಪವಾರ್, ವಿನೋದ ರಾಠೋಡ್, ಬಾಬು, ರಮೇಶ, ಪ್ರಭಾಕರ ಪವಾರ ಇತರರಿದ್ದರು.
ಯಡ್ರಾಮಿಯ ನೂತನ ತಾಲೂಕು ಕೇಂದ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಲ್ಲ ತಾಲೂಕು ಕಚೇರಿಗಳು ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿ ಕೇಂದ್ರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಗರಾಭಿವೃದ್ಧಿ ಇಲಾಖೆಯ ಕಾರ್ಯದಶರ್ಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಆದರೂ ಮತ್ತೊಮ್ಮೆ ಅಧಿಕಾರಿಗಳ ಜತೆ ಚಚರ್ಿಸಿ ಪಟ್ಟಣ ಪಂಚಾಯಿತಿ ಮಾಡಲು ಶ್ರಮಿಸಲಾಗುವುದು.
| ಡಾ. ಅಜಯಸಿಂಗ್, ಶಾಸಕ ಹಾಗೂ ಪ್ರತಿಪಕ್ಷದ ಮುಖ್ಯ ಸಚೇತಕ